ಪರಿಷತ್ ಚುನಾವಣೆ: ‘ಕೈ’ ಅಭ್ಯರ್ಥಿ ಮರಿತಿಬ್ಬೆಗೌಡರಿಗೆ ಗೆಲ್ಲಿಸುವಂತೆ ಮಾಜಿ ಮೇಯರ್ ಗಳಿಂದ ಮನವಿ.

ಮೈಸೂರು,ಮೇ,27,2024 (www.justkannada.in):  ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳು ಮನವಿ ಮಾಡಿದರು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ, ಮಾಜಿ ಮೇಯರ್ ಗಳಾದ ಹೆಚ್ ಎನ್ ಶ್ರೀಕಂಠಯ್ಯ, ಬಿ ಕೆ ಪ್ರಕಾಶ್, ನರಸಿಂಹ ಅಯ್ಯಂಗಾರ್, ಟಿ ಬಿ ಚಿಕ್ಕಣ್ಣ, ಪುರುಷೋತ್ತಮ್, ದಕ್ಷಿಣಾಮೂರ್ತಿ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ, ಪುಷ್ಪಲತಾ ಜಗನ್ನಾಥ್ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಮಾಜಿ ಮೇಯರ್ ಶ್ರೀಕಂಠಯ್ಯ, ಮರಿತಿಬ್ಬೆಗೌಡರು ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ಮರಿತಿಬ್ಬೆಗೌಡರ ಬಗ್ಗೆ ಎಲ್ಲಾ ಶಿಕ್ಷಕರಿಗೂ ಮಾಹಿತಿ ಇದೆ. ಕಾಂಗ್ರೆಸ್ ಸರ್ಕಾರ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದೆ. ಶಿಕ್ಷಕರ ವೇತನ ತಾರತಮ್ಯ ಬಗ್ಗೆ ಮರಿತಿಬ್ಬೆಗೌಡರು ಸಿಎಂ ಡಿಸಿಎಂ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶಿಕ್ಷಕರಿಗೆ ಒಪಿಎಸ್ ಜಾರಿ ಮಾಡೋದಾಗಿ ಭರವಸೆ ನೀಡಿದೆ. ಶಿಕ್ಷಕರ ನೇಮಕಾತಿಗೂ ಕೂಡ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಮತದಾನದಲ್ಲಿ ಹಲವು ಕುಲಗೆಟ್ಟ ಮತದಾನವು ಆಗಿದೆ. ಹಾಗಾಗಿ ಮರಿತಿಬ್ಬೆಗೌಡರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಇನ್ನು ಮಾಜಿ ಮೇಯರ್ ಬಿ.ಕೆ ಪ್ರಕಾಶ್ ಮಾತನಾಡಿ, ದಕ್ಷಿಣ ಶಿಕ್ಷಕರ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ಕೇವಲ ಓರ್ವ ಉದ್ಯಮಿಯಷ್ಟೇ. ವಿವೇಕಾನಂದಗೆ ಶಿಕ್ಷಕರ ಜೊತೆ ಒಡನಾಟವಿಲ್ಲ.ವಿವೇಕಾನಂದಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಮರಿತಿಬ್ಬೇಗೌಡರು ಸತತ ನಾಲ್ಕು ಬಾರಿ ಆಯ್ಕೆಯಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದ್ದು, ಹೆಚ್ಚಿನ ಒಡನಾಟವಿದೆ. ಹಾಗಾಗಿ ಶಿಕ್ಷಕ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು‌ ಎಂದು ಬಿ. ಕೆ ಪ್ರಕಾಶ್ ಮನವಿ ಮಾಡಿದರು.

Key words: congress, candidate, Maritibbe Gowda