ಪ್ರಜ್ವಲ್ ರೇವಣ್ಣ ಪ್ರಕರಣ: ಅಂತರ ಕಾಯ್ದುಕೊಂಡ ಜೆಡಿಎಸ್ ಇಬ್ಬರು ನಾಯಕರು.

ಮೈಸೂರು,ಮೇ,28,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಶಾಸಕ ಜಿ.ಟಿ ದೇವೇಗೌಡರು ಅಂತರ ಕಾಯ್ದುಕೊಂಡಿದ್ದಾರೆ.

ಪ್ರಕರಣ ಕುರಿತು ಮೈಸೂರಿನಲ್ಲಿ ಮಾತನಾಡಿದ ಮಾಜಿ ಶಾಸಕ ಸಾ.ರಾ ಮಹೇಶ್, ದೇವೇಗೌಡರು ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇಷ್ಟೊತ್ತಿಗೆ  ಪ್ರಜ್ವಲ್ ವಾಪಸ್ ಬರಬೇಕಿತ್ತು. ಈಗಲಾದರೂ ಬರುತ್ತಿದ್ದಾರೆ ಬರಲಿ. ಈ ನೆಲದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಸತ್ಯಾಸತ್ಯತೆ ಏನು ಎಂಬುದು ಗೊತ್ತಾಗುತ್ತದೆ. ರೇವಣ್ಣ ಬಂಧನ ವಿಚಾರದಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಆದರೆ ಪ್ರಜ್ವಲ್ ವಿಚಾರದಲ್ಲಿ ಮಾತನಾಡಲು ಈಗಲೂ ನನಗೆ ಮನಸ್ಸು ಒಪ್ಪುತ್ತಿಲ್ಲ. ಅವರು ಬರಲಿ ನೋಡೊಣ ಎಂದರು.

ಪಕ್ಷದಲ್ಲಿ ಯಾರೋ ಒಬ್ಬರು ಮಾಡಿದ್ದನ್ನ ಇಡೀ ಪಕ್ಷಕ್ಕೆ ಅಂಟಿಸುವುದು ಸರಿಯಲ್ಲ. ಎಲ್ಲ ಪಕ್ಷದಲ್ಲೂ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಏನೇನು ಆಗುತ್ತಿದೆ ಎಂಬುದನ್ನ ಜನ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ರೇವಣ್ಣ ಬಂಧನ ವಿಚಾರ ಎಲ್ಲ ಎಸ್ಐಟಿ ಅಧಿಕಾರಿಗಳು ಹೇಗೆ ವರ್ತಿಸಿದರು. ಯಾರ ಒತ್ತಡದಲ್ಲಿ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಾ.ರಾ ಮಹೇಶ್ ಹೇಳಿದರು.

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್,  ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಈಗ ಗೊತ್ತಾಗುತ್ತಿದೆ. ಇದರ ಜವಾಬ್ದಾರಿಯನ್ನ ಸಿಎಂ ತೆಗೆದುಕೊಳ್ಳಬೇಕು. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನ ಗುರುತಿಸಿ ತಲೆ ತಂಡಬೇಕು. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇದ್ದಂತಹ ವ್ಯವಸ್ಥೆಗಳು ಈಗ ಇಲ್ಲ ಎಂಬುದು ಜಗತ್ ಜಾಹೀರಾಗಿದೆ ಎಂದು ಹೇಳಿದರು.

ಪ್ರಜ್ವಲ್ ಗೂ ನಮಗೂ ಸಂಬಂಧ ಇಲ್ಲ- ಶಾಸಕ ಜಿ.ಟಿ ದೇವೇಗೌಡ.

ಪ್ರಜ್ವಲ್  ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಂಡ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರು, ಪ್ರಜ್ವಲ್ ಗೂ ನಮಗೂ ಸಂಬಂಧ ಇಲ್ಲ. ಪ್ರಜ್ವಲ್ ಅವರನ್ನ ಈಗಾಗಲೇ ಪಕ್ಷದಿಂದ ಉಚ್ಚಾಟಿಸಿದ್ದೇವೆ‌. ನನಗೆ ಸಂಬಂಧವಿಲ್ಲದ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ ಎಂದರು.

Key words: Prajwal Revanna, case, JDS, leaders, distance