ಒತ್ತುವರಿ ತೆರವು ಮೂಲಕ ಭೂಗಳ್ಳರಿಗೆ ಶಾಕ್: ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿ ಸರ್ಕಾರದ ವಶಕ್ಕೆ

ಮೈಸೂರು,ಜುಲೈ,25,2024 (www.justkannada.in):  ಮೈಸೂರಿನಲ್ಲಿ ಭೂಗಳ್ಳರಿಗೆ ತಹಸೀಲ್ದಾರ್ ಮಹೇಶ್ ಕುಮಾರ್ ಶಾಕ್ ಕೊಟ್ಟಿದ್ದು, ಸರ್ಕಾರಿ ಜಾಗವನ್ನ ಕಬಳಿಸಿ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನ ತೆರವು ಮಾಡಿ ಭೂಮಿಯನ್ನ ಸರ್ಕಾರದ ವಶಕ್ಕೆ ಪಡೆಯಲಾಗಿದೆ.  ಸುಮಾರು 10 ರಿಂದ 12 ವಾಣಿಜ್ಯ ಮಳಿಗೆಗಳನ್ನ ತೆರವುಗೊಳಿಸಿ ಕೋಟ್ಯಾಂತರ ಬೆಲೆಬಾಳುವ ಭೂಮಿಯನ್ನ ಸರ್ಕಾರದ ವಶಕ್ಕೆ ಪಡೆದಿದ್ದಾರೆ. ತಹಸೀಲ್ದಾರ್ ಮಹೇಶ್ ಕುಮಾರ್ ರವರು ಖುದ್ದು ಸ್ಥಳದಲ್ಲಿ ಹಾಜರಿದ್ದು ಒತ್ತುವರಿ ಕಾರ್ಯವನ್ನ ನಡೆಸಿದ್ದಾರೆ.

ಮೈಸೂರು ತಾಲೂಕು ಇಲವಾಲ ಹೋಬಳಿ ಮಾದಗಳ್ಳಿ ಗ್ರಾಮ ಗದ್ದಿಗೆ ಮುಖ್ಯ ರಸ್ತೆ ಸರ್ವೆ ನಂ.54 ರಿಂದ 57 ರವರೆಗಿನ ಸ್ಥಳ ಸರ್ಕಾರಿ ರಸ್ತೆ ಆಗಿದೆ. ಸದರಿ ಸ್ಥಳವನ್ನ ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರು ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿದ್ದರು.ಈ ಮಾಹಿತಿ ಅರಿತ ತಹಸೀಲ್ದಾರ್ ಮಹೇಶ್ ಕುಮಾರ್ ದಾಖಲೆಗಳನ್ನ ಪರಿಶೀಲಿಸಿ ಅಕ್ರಮವಾಗಿ ಒತ್ತುವರಿ ಆಗಿರುವುದನ್ನ ಖಚಿತಪಡಿಸಿಕೊಂಡರು.

ಇಂದು ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಮಳಿಗೆಗಳನ್ನ ನೆಲಸಮಗೊಳಲಾಗಿದೆ. ಸುಮಾರು 3 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಒತ್ತುವರಿ ತೆರುವು ಕಾರ್ಯಾಚರಣೆಯಲ್ಲಿ ಇಲವಾಲ ಹೋಬಳಿ ಉಪ ತಹಸೀಲ್ದಾರ್ ಕುಬೇರ್, ರಾಜಸ್ವ ನಿರೀಕ್ಷಕರಾದ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಭಾರತೀಶ್, ಬೋಗಾದಿ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿ ಬಸವರಾಜ್,ರೆವಿನ್ಯೂ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಹಾಗೂ ಪಿಡಬ್ಲ್ಯೂ ಡಿ ಸಿಬ್ಬಂದಿಗಳು ಭಾಗವಹಿಸಿದ್ದರು.  ಇಲವಾಲ ಪೊಲೀಸ್ ಠಾಣೆ ಸಿಬ್ಬಂದಿಗಳು ಭದ್ರತೆ ಒದಗಿಸಿದ್ದರು.

Key words: mysore, encroachment, clearance, land, government