ಪಾರ್ಟ್​ ಟೈಮ್​ ಮಂತ್ರಿ, ಫುಲ್​ ಟೈಮ್ ಕೆಪಿಸಿಸಿ ಅಧ್ಯಕ್ಷರಿಗೆ ನೀರಾವರಿ ಖಾತೆ ಬೇಡ: ಬೇರೆಯವರಿಗೆ ವಹಿಸಿ-ಆರ್.ಅಶೋಕ್

ಬೆಂಗಳೂರು,ಆಗಸ್ಟ್,13,2024 (www.justkannada.in): ಪಾರ್ಟ್​ ಟೈಮ್​ ನೀರಾವರಿ ಸಚಿವರಾಗಿರುವ ಡಿಕೆ ಶಿವ ಕುಮಾರ್ ಅವರಿಗೆ ಇಲಾಖೆ ನಿರ್ವಹಿಸಲು ಪುರುಸೊತ್ತಿಲ್ಲದಿದ್ದರೆ, ನೀರಾವರಿ ಖಾತೆಯನ್ನು ಬೇರೆ ಯಾರಾದರೂ ಸಮರ್ಥ ಸಚಿವರಿಗೆ ಒಪ್ಪಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್,  ‘ನಾಡಿನ ರೈತರ ಜೀವನಾಡಿ ಆಗಿರುವ ಜಲಾಶಯಗಳ ನಿರ್ವಹಣೆ ಬಗ್ಗೆ ರಾಜ್ಯ ಕಾಂಗ್ರೆಸ್​ ಸರ್ಕಾರದ ಅಸಡ್ಡೆ, ನಿರ್ಲಕ್ಷ್ಯದಿಂದ ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತ ಸಂಭವಿಸಿರುವ ಬೆನ್ನಲ್ಲೇ, ಈಗ ಮತ್ತೊಂದು ಅಣೆಕಟ್ಟು ಅಪಾಯದ ಅಂಚಿನಲ್ಲಿರುವುದು ಬೆಳಕಿಗೆ ಬಂದಿದೆ. ಗದಗ ಮತ್ತು ವಿಜಯನಗರ ಜಿಲ್ಲೆಗಳ ನೀರಾವರಿಗಾಗಿ ಅನುಷ್ಠಾನಗೊಂಡ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಹಮ್ಮಗಿ ಬ್ಯಾರೇಜ್​ನ ಗೇಟ್​ಗಳ ದುರಸ್ತಿಗೆ ಬಂದಿವೆ. ಒಂದು ವರ್ಷದ ಹಿಂದೆಯೇ ಮುನ್ಸೂಚನೆ ನೀಡಿದ್ದರೂ ಸಹ ಸರ್ಕಾರ ಇದುವರೆಗೂ ಗೇಟ್​ ದುರಸ್ತಿ ಕಾರ್ಯ ಆರಂಭಿಸಿಲ್ಲ’ ಎಂದು ಕಿಡಕಾರಿದರು.

‘ಸಿಎಂ ಸಿದ್ದರಾಮಯ್ಯನವರೇ  ಹಮ್ಮಗಿ ಬ್ಯಾರೇಜ್ ನ 5-6 ಗೇಟುಗಳು ಶಿಥಿಲಗೊಂಡಿರುವ ವರದಿ ಇದೆ. ತಮ್ಮ part-time ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರಿಗೆ ಇಲಾಖೆ ನಿರ್ವಹಿಸಲು ಪುರುಸೊತ್ತಿಲ್ಲದಿದ್ದರೆ, ನೀರಾವರಿ ಖಾತೆಯನ್ನು ಬೇರೆ ಯಾರಾದರೂ ಸಮರ್ಥ ಸಚಿವರಿಗೆ ಒಪ್ಪಿಸಿ. ಅದು ಬಿಟ್ಟು ಒಬ್ಬ part-time ಮಂತ್ರಿ, full-time ಕೆಪಿಸಿಸಿ ಅಧ್ಯಕ್ಷರಿಗೆ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಅಂತಹ ಪ್ರಮುಖ ಖಾತೆ ನೀಡಿ ಜನರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ. ನಿಮ್ಮ ರಾಜಕೀಯ ತೆವಲಿಗೆ ಜಲಾಶಯಗಳನ್ನ ನಿರ್ಲಕ್ಷಿಸಿ ಅನ್ನದಾತರು, ಜನ ಸಾಮಾನ್ಯರ ಬದುಕನ್ನ ಅಪಾಯಕ್ಕೆ ತಳ್ಳಬೇಡಿ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Key words: Irrigation department, DK Shivakumar,  R.Ashok