ಪಕ್ಷದ ವಿರುದ್ದ ಮಾತನಾಡಿದವರನ್ನು ಕಿತ್ತು ಬಿಸಾಕುವ ಕೆಲಸ ಪಕ್ಷ ಮಾಡಿದೆ: ಎಲ್.ನಾಗೇಂದ್ರ

ಮೈಸೂರು,ಆಗಸ್ಟ್,15,2024 (www.justkannada.in): ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಎಲ್. ನಾಗೇಂದ್ರ, ಪಕ್ಷದ ವಿರುದ್ದ ಮಾತನಾಡಿದವರನ್ನು ಕಿತ್ತು ಬಿಸಾಕುವ ಕೆಲಸ ಪಕ್ಷ ಮಾಡಿದೆ ಎಂದು ಹೇಳಿದ್ದಾರೆ.

78ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆ, ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಬಳಿಕ ಭಾರತಾಂಭೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ, ಮೈವಿ ರವಿಶಂಕರ್, ಮಾಜಿ ಉಪಮೆಯರ್ ಶೈಲೆಂದ್ರ, ಗಿರಿಧರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಲ್ . ನಾಗೇಂದ್ರ, ಮೇಲ್ನೋಟಕ್ಕೆ ಈ ರೀತಿ ಕಂಡು ಬರುತ್ತದೆ. ನಮ್ಮಲ್ಲಿ ಯಾವುದೇ ಬಣಗಳು ಇಲ್ಲ. ಬಿಜೆಪಿ ಪಕ್ಷದಲ್ಲಿ ಒಂದು ತತ್ವ ಸಿದ್ದಾಂತ ಇದೆ. ಎಲ್ಲರು ಅದನ್ನ ಒಪ್ಪಿಕೊಂಡು ಕೆಲಸ ಮಾಡಬೇಕು ಎಂದರು.

ಪಕ್ಷದ ವಿರುದ್ಧವೇ ಯತ್ನಾಳ್ ವಾಗ್ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ,  ಬಿಜೆಪಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ಯಾರು ಹೇಳಿಕೆ ಕೊಡಬಾರದು. ಕೇಂದ್ರದ ನಾಯಕರು ಇದೆಲ್ಲವನ್ನ ಸರಿಪಡಿಸುತ್ತಾರೆ. ಪಕ್ಷದ ವಿರುದ್ಧ ಮಾತಾಡಿದವರನ್ನ ಕಿತ್ತು ಬಿಸಾಕುವ ಕೆಲಸವನ್ನ ಪಕ್ಷ ಮಾಡಿದೆ. ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ ಎಂದರು.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬಾರದು.

ಗ್ಯಾರಂಟಿ ಯೋಜನೆ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಲ್.ನಾಗೇಂದ್ರ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನೇ ಪರಿಷ್ಕರಣೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಗೆದ್ದಿರೋದೇ ಗ್ಯಾರಂಟಿ ಯೋಜನೆಯಿಂದ. ಈಗ ಪರಿಷ್ಕರಣೆ ಮಾಡ್ತೇವೆ ಎಂದರೆ ಏನರ್ಥ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬಾರದು. ಕೊಟ್ಟ ಮಾತಿನಂತೆ ನೀವು ಗ್ಯಾರಂಟಿ ಯೋಜನೆ ಮುಂದುವರೆಸಬೇಕು. ಇಲ್ಲ ಬಿಜೆಪಿ ನಿಮ್ಮ ವಿರುದ್ದ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

Key words: spoke, against, party, action, L. Nagendra