ಮೈಸೂರು ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ. ವಿಮೆ

ಮೈಸೂರು,ಆಗಸ್ಟ್,21,2024 (www.justkannada.in) ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಈ ಮಧ್ಯೆ ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ. ವಿಮೆ ಮಾಡಿಸಲಾಗಿದೆ.

ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿ ಲಿಮಿಟೆಡ್  ನಿಂದ ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ.  ವಿಮೆ ಸೌಲಭ್ಯ ಒದಗಿಸಲಾಗಿದೆ.  ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಮಾವುತರು, ಕಾವಾಡಿಗಳಿಗೆ ತಲಾ‌ 2 ಲಕ್ಷ‌ ರೂ ವಿಮೆ  ಸೌಲಭ್ಯ ಕಲ್ಪಿಸಲಾಗಿದೆ. ನಾಲ್ಕು ಮೀಸಲು ಆನೆಗಳನ್ನು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಸೌಲಭ್ಯ ಸಿಗಲಿದೆ.

ವಲಯ ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ಸಹಾಯಕರು, ಸಿಬ್ಬಂದಿಗಳಿಗೂ ವಿಮೆ ಸೌಲಭ್ಯ  ಮಾಡಿಸಲಾಗಿದ್ದು,  ಸಾರ್ವಜನಿಕ ಆಸ್ತಿ- ಪಾಸ್ತಿಗೆ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಗಜಪಡೆಗೆ ನಾಡಿಗೆ ಬಂದ ಸಂದರ್ಭದಲ್ಲಿ ತಾಲೀಮು ಅಥವಾ ಇನ್ನಿತರ ಸಂದರ್ಭದಲ್ಲಿ ಗಜಪಡೆಯಿಂದ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಗೆ ತೊಂದರೆಯಾದರೆ 50 ಲಕ್ಷದವರೆಗೆ ವಿಮೆ ಸೌಲಭ್ಯ ಜಾರಿಯಲ್ಲಿರಲಿದೆ.

ಈ ವಿಮೆಯು 15-8-2024 ರಿಂದ 18-10-2024 ರವರಗೆ ಜಾರಿಯಲ್ಲಿರಲಿದ್ದು 75 ಸಾವಿರ ರೂಗಳ ವಿಮೆ ಮೊತ್ತವನ್ನ ಅರಣ್ಯ ಇಲಾಖೆ ಪಾವತಿಸಿದೆ. ವಿಮಾ ಕಂಪನಿಗೆ ಪ್ರೀಮಿಯಂ ಹಣ ಪಾವತಿ ಮಾಡಲಾಗಿದೆ.

Key words: 2.50 crore, Mysore Dasara, Gajapade,  Insurance