ರಾಜ್ಯಪಾಲರ ವಿರುದ್ದ ಮತ್ತೆ ಹೋರಾಟ: ರಾಜಭವನ ಚಲೋಗೆ ಕರೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್, 27,2024 (www.justkannada.in):  ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ಧ ಇದೀಗ ಮತ್ತೆ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ.  ಆಗಸ್ಟ್ 31 ರಂದು ರಾಜಭವನ ಚಲೋಗೆ ಕೆಪಿಸಿಸಿ ಅಧ್ಯಕ್ಷ ಹಾಗೂ  ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ‘ಆಗಸ್ಟ್ 31ರಂದು ರಾಜಭವನ ಚಲೋ ನಡೆಸುತ್ತೇವೆ.  ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಹೋಗಿ ಯಾವ ಯಾವ ಪೆಂಡಿಂಗ್ ಪ್ರಾಸಿಕ್ಯೂಷನ್‌ ಇದೆ ಅದನ್ನು ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸುತ್ತೇವೆ. ಈ ಹಿನ್ನಲೆ ಎಲ್ಲ ಶಾಸಕರು, ಸಚಿವರು, ಪರಿಷತ್ ಸದಸ್ಯರು ಭಾಗಿಯಾಗಬೇಕು ಎಂದು ಸೂಚಿಸಿದರು.

ಇದೇ ವೇಳೆ ಮತ್ತೆ ಕೇಂದ್ರ ಸಚಿವ ಹೆಚ್​ಡಿಕೆ ವಿರುದ್ದ ಮತ್ತೆ ಗುಡುಗಿದ ಡಿಕೆ ಶಿವಕುಮಾರ್,  ‘ನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಸಾಚಾ ಕೆಲಸ ಮಾಡುವವರು.  ಇವರ ವಿರುದ್ಧ 10 ವರ್ಷಗಳ ಹಿಂದೆಯೇ ಕೇಸ್ ದಾಖಲಾಗಿದೆ. 2023ರ ನವೆಂಬರ್ 21ರಂದು ಲೋಕಾಯುಕ್ತ SIT ಅಧಿಕಾರಿಗಳು ಕೂಡ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ನಾವೇನೂ ತಿರುಚಿ ಪರಚಿ ಮಾತಾಡುತ್ತಿಲ್ಲ. 218 ಪುಟಗಳ ತನಿಖಾ ವರದಿಯನ್ನು ರಾಜ್ಯಪಾಲರಿಗೆ SIT ನೀಡಿದೆ. ಬಹಳ ಸತ್ಯಕ್ಕೆ ಹೆಸರಾದವರು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ನಾನು ಸಹಿಯೇ ಮಾಡಲಿಲ್ಲ ಎಂದು ಹೇಳಿದರು. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯ ಆಯ್ತು ಎಂದರು.

‘ಅವರ ಸಹಿ ಅಲ್ಲ ಅಂದ ಮೇಲೆ ಯಾರೋ ಫೋರ್ಜರಿ ಮಾಡಿದ್ದಾರೆ. ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಯಾಕೆ ದೂರು ಕೊಟ್ಟಿಲ್ಲ?. ಸಹಿ ಫೋರ್ಜರಿ ಆಗಿದ್ದರೇ ಒಬ್ಬ ಪಿಸಿಗಾದರೂ ದೂರು ಕೊಡಬೇಕಲ್ವಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

Key words: Governor, Raj Bhavan Chalo, DCM, DK Shivakumar