ಖರ್ಗೆ ಅವರ ಹೆಸರಿಗೆ ಮಸಿ ಬಳಿಯಲು ಛಲವಾದಿ ನಾರಾಯಣಸ್ವಾಮಿ ದೊಡ್ಡ ಪ್ರಯತ್ನ- ಬಿಜೆ ವಿಜಯ್ ಕುಮಾರ್ ಕಿಡಿ

ಮೈಸೂರು,ಆಗಸ್ಟ್,30,2024 (www.justkannada.in): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ ​​ಗೆ ಅಕ್ರಮವಾಗಿ ಸಿಎ ಸೈಟ್​ ಗಳನ್ನು​ ನೀಡಲಾಗಿದೆ ಎಂದು ಆರೋಪಿಸಿದ ವಿಧಾನ ಪರಿಷತ್  ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿರುವ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿಜೆ ವಿಜಯ್ ಕುಮಾರ್, ರಾಜಕೀಯ ದ್ವೇಷದಿಂದ ಖರ್ಗೆಯವರ ಹೆಸರಿಗೆ ಮಸಿ ಬಳಿಯುವ ದೊಡ್ಡ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳು, ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಇಂದು  ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಿತು.

ಈ ವೇಳೆ ಮಾತನಾಡಿದ ಬಿಜೆ ವಿಜಯ್ ಕುಮಾರ್,  ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಕೆಲವರು ಆರೋಪ ಮಾಡುತ್ತಿದ್ದಾರೆ. ಖರ್ಗೆಯವರ ಮನೆಯಲ್ಲೇ ಇದ್ದು ರಾಜಕೀಯವಾಗಿ ಬೆಳೆದ ಕೆಲವರು ಅವರ ಮೇಲೆ ಆರೋಪ ಮಾಡಿದ್ದಾರೆ. ಆರ್ಟಿಕಲ್ 371ಜೆ ಇಂಪ್ಲಿಮೆಂಟ್ ಮಾಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾತ್ರ ದೊಡ್ಡದು. ಖರ್ಗೆಯವರ ಬಗ್ಗೆ ಯಾವೊಬ್ಬ ರಾಜಕಾರಣಿ ಇಲ್ಲಿವರೆಗೂ ಅಲಿಗೆಷನ್ ಮಾಡಿಲ್ಲ. ರಾಜಕೀಯ ದ್ವೇಷದಿಂದ ಛಲವಾದಿ ನಾರಾಯಣಸ್ವಾಮಿ ಖರ್ಗೆಯವರ ಹೆಸರಿಗೆ ಮಸಿ ಬಳಿಯುವ ದೊಡ್ಡ ಪ್ರಯತ್ನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದಾರ್ಥ ಟ್ರಸ್ಟ್ ನಲವತ್ತು ವರ್ಷಗಳ ಹಿಂದೆಯೇ ಪ್ರಾರಂಭ ಮಾಡಲಾಗಿದೆ. ಸಿದ್ದಾರ್ಥ ಟ್ರಸ್ಟ್ ಮೂಲಕ ಬುದ್ಧ, ಅಂಬೇಡ್ಕರ್ ಚಿಂತನೆಗಳನ್ನ ತಿಳಿಸಲು ಮುಂದಾಗಿದ್ದಾರೆ. ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಕುಟುಂಬವನ್ನ ಮೇಲೇತ್ತುವ ಕೆಲಸವನ್ನ ಸಿದ್ದಾರ್ಥ ಟ್ರಸ್ಟ್ ಮೂಲಕ ಮಾಡಲಾಗುತ್ತಿದೆ. ಕೆಐಎಡಿಬಿಯವರು ಸಿದ್ದಾರ್ಥ ಟ್ರಸ್ಟ್ ಗೆ ಮಾತ್ರವಲ್ಲ ಇತರೆ ಸಂಘ ಸಂಸ್ಥೆಗಳಿಗೂ ಜಾಗ ನೀಡಿದ್ದಾರೆ. ಸಿದ್ದಾರ್ಥ ಟ್ರಸ್ಟ್ ಗೆ ಕಾನೂನಾತ್ಮಕವಾಗಿ ಜಾಗ ನೀಡಲಾಗಿದೆ ಎಂದು ಬಿಜೆ ವಿಜಯ್ ಕುಮಾರ್ ಮಾಹಿತಿ ನೀಡಿದರು.

Key words: Mallikarjuna Kharge, name, Chalavadi Narayanaswamy, BJ Vijay Kumar