ಪರಿಸರಸ್ನೇಹಿ ಮೂರ್ತಿ ತಯಾರಿಕೆ: ಮಣ್ಣಿನ ಗಣಪನಿಗೆ ಜೀವ ತುಂಬಿದ ಚಿಣ್ಣರು

ಮೈಸೂರು,ಸೆಪ್ಟಂಬರ್,3,2024 (www.justkannada.in): ಶ್ರೀ ದುರ್ಗಾ ಫೌಂಡೇಶನ್  ನಗರದ ಮಂಚೇಗೌಡನ ಕೊಪ್ಪಲಿನಲ್ಲಿರುವ ಸರ್ಕಾರಿ ಪ್ರೌಢಶಾಲೆ  ಮಕ್ಕಳಿಗಾಗಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಜೀವ ಗಣೇಶ ಮೂರ್ತಿ ತಯಾರಿಸುವ ಶಿಬಿರ ನಡೆಯಿತು.

ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮದೇ ಆದಂತಹ ವಿಭಿನ್ನ ಶೈಲಿಯ ಗಣಪತಿ ಮೂರ್ತಿ ತಯಾರಿಸಿ, ಸಂಭ್ರಮಿಸಿದರು. ಮೂರ್ತಿಯೊಳಗೆ ಬೀಜ ಇಟ್ಟು ಜೀವ ಗಣಪತಿ ತಯಾರಿಸಿ ಖುಷಿಪಟ್ಟು ಮನೆಗಳಿಗೆ ತೆಗೆದುಕೊಂಡು ಹೋದರು.

ಕಲಾವಿದರಾದ ಆರ್.ಲಕ್ಷೀ ಚಲಪತಿ ಮಾತನಾಡಿ, ಭಗವಂತನಿಗೆ ಭಕ್ತಿಯಿಂದ ನೆರವೇರಿಸುವ ಪೂಜೆ ಮುಖ್ಯವೇ ಹೊರತು ವಿಜೃಂಭಣೆ, ಆಡಂಬರವಲ್ಲ. ವಿಷಕಾರಿ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕವಾಗಿದ್ದು, ಅವುಗಳಿಂದ ಜಲಮಾಲಿನ್ಯ ಉಂಟಾಗುತ್ತಿದೆ. ಹಾಗೆಯೇ ಇತರ ಜೀವ ಜಂತುಗಳಿಗೂ ಹಾನಿ ಸಂಭವಿಸುತ್ತಿದೆ. ಶುದ್ಧ ಜೇಡಿಮಣ್ಣಿನಿಂದ ತಯಾರಿಸಿದ ಚಿಕ್ಕ ಗಣೇಶ ಮೂರ್ತಿಗಳನ್ನು ಪೂಜಿಸುವ ಮೂಲಕ ರಾಸಾಯನಿಕ ಹಾಗೂ ಪ್ಲಾಸ್ಟಿಕ್‌ ಮುಕ್ತ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಮಕ್ಕಳ ಅರಿತುಕೊಳ್ಳಬೇಕಿದೆ ಎಂದರು.

ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಜೇಗೌಡನ ಕೊಪ್ಪಲು ರವಿ ಮಾತನಾಡಿ,  ಪಿಓಪಿ ಬಾಂಬೆ ಗಣೇಶಗಳನ್ನು ಕೂರಿಸುತ್ತಿದ್ದೇವೆ. ಇದರಿಂದ ಪರೋಕ್ಷವಾಗಿ ಮನುಷ್ಯನ ಮೇಲೆ ಪರಿಣಾಮ ಬೀರುತ್ತಿದೆ. ಶಾಸ್ತ್ರಗಳ ಪ್ರಕಾರ ಕಲ್ಲು, ಮಣ್ಣು ಮತ್ತು ಲೋಹದಿಂದ ವಿಗ್ರಹವನ್ನು ತಯಾರಿಸಬೇಕು. ಇವುಗಳಲ್ಲಿ ಮಾತ್ರ ದೈವತ್ವದ ಶಕ್ತಿ ಇರುತ್ತದೆ. ಪಿಒಪಿಯಿಂದ ತಯಾರಿಸಿದ ಗಣೇಶಮೂರ್ತಿಗಳಲ್ಲಿ ದೈವಶಕ್ತಿ ಇರುವುದಿಲ್ಲ ಕೇವಲ ಪ್ರದರ್ಶನಕಷ್ಟೇ ಸೀಮಿತವಾಗಿರುತ್ತವೆ’ ಎಂದರು.

ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮಾತನಾಡಿ,  ಗಣೇಶ ಹಬ್ಬದಲ್ಲಿ ಸ್ನೇಹಿ ಗಣೇಶ ಮೂರ್ತಿಗಳಿಂದ ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ್ದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಂತೋಷ್ ಕಿರಾಲು, ಅಶ್ವಿನಿ ಗೌಡ, ಶಾಲೆಯ ಮುಖ್ಯೋಪಾಧ್ಯಾಯರಾದ ಶುಭ, ಹಾಗೂ ಶಿಕ್ಷಕರಿಂದ ಹಾಜರಿದ್ದರು.

Key worsds: Eco-Friendly, ganesha, Mysore, School, Children