ನಾನೂ ಕೂಡ ಸಿಎಂ ಹುದ್ದೆ ಆಕಾಂಕ್ಷಿ: ಆಸೆ ಪಡೋದು ತಪ್ಪಲ್ಲ- ಬಸವರಾಜ ರಾಯರೆಡ್ಡಿ

ಕೊಪ್ಪಳ,ಸೆಪ್ಟಂಬರ್,9,2024 (www.justkannada.in): ನಾನೂ ಕೂಡ ಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದೇನೆ. ಸಿಎಂ ಹುದ್ದೆಗೆ ಆಸೆ ಪಡೋದು ತಪ್ಪಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ರಾಯರೆಡ್ಡಿ, ಲಿಂಗಾಯಿತರಲ್ಲಿ ನಾನು ಹಿರಿಯ ನಾಯಕ ಕಲ್ಯಾಣ ಕರ್ನಾಟಕದಿಂದ ಹೆಚ್ಚು ಬಾರಿ ಆಯ್ಕೆಯಾಗಿದ್ದೇನೆ. ಯಾರು ಸಿಎಂ ಆಗಬೇಕೆಂದು ವರಿಷ್ಠರು ಸಿದ್ದರಾಮಯ್ಯ ತೀರ್ಮಾನಿಸುತ್ತಾರೆ. ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿ ಸಿಎಂ ಆಗುತ್ತಾರೆ ಎಂದರು.

ಸಿಎಂ ಕುರ್ಚಿ ಖಾಲಿ ಎಲ್ಲಿದೆ? ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಉಳಿದ ಅವಧಿಗೂ ಮುಂದುವರಿಯಲಿದ್ದಾರೆ. ಅವರು ಸಿಎಂ ಆಗಿ ಮುಂದುವರಿಯುವುದರಿಂದ ರಾಜ್ಯಕ್ಕೆ ಒಳ್ಳೆಯದಾಗಲಿದೆ. ಅವರಿಗೆ ಆಡಳಿತದ ಅನುಭವ ಇದೆ. ಆದ್ದರಿಂದ ಅವರೇ ಸಿಎಂ ಆಗಿ ಮುಂದುವರಿಯಲಿ. ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎಂದು ಯಾರು ಹೇಳಿದ್ದಾರೆ? ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂಬುದು ನನ್ನ ಅಭಿಪ್ರಾಯ. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ ಸಿಎಂ ಕುರ್ಚಿ ಖಾಲಿ ಇಲ್ಲ. ಯಾರೂ ಆಸೆ ಪಡುವ ಅವಶ್ಯಕತೆ ಇಲ್ಲ ಎಂದರು.

ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಂ.ಬಿ‌.ಪಾಟೀಲ್ ಹೇಳಿಕೆಯಲ್ಲಿ ತಪ್ಪಿಲ್ಲ. ಯಾರೂ ಬೇಕಾದರೂ ಸಿಎಂ ಆಗಬಹುದು. ಈಗ ನಾನು ಇದ್ದೇನೆ. ನಾನೇಕೆ ಸಿಎಂ ಆಗಬಾರದು. ಒಕ್ಕಲಿಗರಿಗೆ ಆದ್ಯತೆ ನೀಡಿದರೆ ಡಿ.ಕೆ. ಶಿವಕುಮಾರ್ ಹಾಗೂ ಜಯಚಂದ್ರ ಅವರು ಕೂಡ ಸಿಎಂ ರೇಸ್ ನಲ್ಲಿ ಇದ್ದಾರೆ. ಮುನ್ನಲೆಯ ನಾಯಕರಾಗಿದ್ದಾರೆ. ಹೈ‌.ಕ ಭಾಗಕ್ಕೆ ಸಿಎಂ ಸ್ಥಾನ ನೀಡುವುದಾದರೆ ಹಾಗೂ ಲಿಂಗಾಯತ ಸಮುದಾಯಕ್ಕೆ ನೀಡುವುದಾದರೆ ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.

Key words: I am, aspirant, CM,  Basavaraja Rayareddy