ಮುಡಾ ಭ್ರಷ್ಟಾಚಾರ : ಡಿಜಿಟಲ್ ಸಾಕ್ಷಿ ನಾಶಕ್ಕೆ ಮುಂದಾದ್ರಾ ಅಧಿಕಾರಿಗಳು?

ಮೈಸೂರು,ಸೆಪ್ಟಂಬರ್, 10,2024 (www.justkannada.in): ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಸಂಬಂಧ ಇದೀಗ ಅಧಿಕಾರಿಗಳು ಡಿಜಿಟಲ್ ಸಾಕ್ಷಿ ನಾಶಕ್ಕೆ ಮುಂದಾಗಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.

ಹೌದು, ಮೈಸೂರಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ ಇದ್ದ ಸಿಸಿ ಕ್ಯಾಮರಾ ಹಾಗೂ ಡಿವಿಆರ್ ನಾಪತ್ತೆಯಾಗಿದ್ದ,  ಇದರಿಂದಾಗಿ ಸಾಕಷ್ಟು ಅನುಮಾನ ಮೂಡಿದೆ. ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ 8 ಸಿಸಿ ಕ್ಯಾಮೆರಾಗಳು ಹಾಗೂ ಡಿವಿಆರ್ ಅನ್ನು ಅಧಿಕಾರಿಗಳು  ತೆಗೆದುಕೊಂಡು ಹೋಗಿದ್ದು, ಹಿಂದಿನ ಆಯುಕ್ತರು ಅವುಗಳನ್ನು ಕೊಂಡೊಯ್ದಿರುವ ಬಗ್ಗೆ ಅನುಮಾನ ಶುರುವಾಗಿದೆ

ಹಿಂದಿನ ಆಯುಕ್ತರು ಕಚೇರಿಗಿಂತ ಹೆಚ್ಚಾಗಿ ಇದೇ ನಿವಾಸದಲ್ಲಿ ಹೆಚ್ಚು ಕಾರ್ಯ ನಿರ್ವಹಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಹಿಂದಿನ ಆಯುಕ್ತರು ಡೆವಲಪರ್‌ ಗಳು ಸೇರಿ ಹಲವರನ್ನು ಮನೆಗೆ ಕರೆಸಿಕೊಂದು ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ.

50-50 ಅನುಪಾತ, ಬದಲಿ ನಿವೇಶನ, ತುಂಡು ಭೂಮಿ ಸೇರಿದಂತೆ ಹಲವು ವ್ಯವಹಾರಗಳಿಗೆ ಈ ಅಧಿಕೃತ ನಿವಾಸ ಕೇಂದ್ರ ಬಿಂದು ಆಗಿದ್ದು, ಇದೆಲ್ಲಕ್ಕೂ ಸಿಸಿ ಕ್ಯಾಮೆರಾಗಳು ಸಾಕ್ಷಿಯಂತಿದ್ದವು. ಆದರೆ ಈಗ ಡಿವಿಆರ್ ಸಹಿತ ಸಿಸಿ ಕ್ಯಾಮೆರಾಗಳನ್ನು ಕೊಂಡೊಯ್ದಿರುವ ಬಗ್ಗೆ  ಹಿಂದಿನ ಆಯುಕ್ತ ಜಿಟಿ.ದಿನೇಶ್‌ಕುಮಾರ್ ಮೇಲೆ ಅನುಮಾನ ವ್ಯಕ್ತವಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂದಿನ ಆಯುಕ್ತ ರಘುನಂದನ್, ಸಿಸಿ ಕ್ಯಾಮೆರಾಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಸದ್ಯ ಆಯುಕ್ತರ ಅಧಿಕೃತ ನಿವಾಸದ ನವೀಕರಣ ಕಾರ್ಯ ಪ್ರಗತಿಯಲ್ಲಿದೆ.

Key words: Muda, corruption, CCTV, DVR,  digital evidence