ಈ ಬಾರಿ ಮೈಸೂರು ದಸರಾದಲ್ಲಿ ‘ಅರ್ಜುನ’ನ ಸ್ಮರಣೆಗೆ ಕೆಎಂಪಿಕೆ ಟ್ರಸ್ಟ್  ಮನವಿ

ಮೈಸೂರು,ಸೆಪ್ಟಂಬರ್,12,2024 (www.justkannada.in): ವಿಶ್ವವಿಖ್ಯಾತ ನಾಡಹಬ್ಬ 414 ನೇ ಮೈಸೂರು ದಸರಾ ಮೆರವಣಿಗೆಯಲ್ಲಿ ಅರ್ಜುನ ಆನೆಯ ಶಬ್ದ ಚಿತ್ರ ಪ್ರದರ್ಶಿಸಿ ಹಾಗೂ ದಸರಾ ವಸ್ತು ಪ್ರದರ್ಶನ ಸರ್ಕಾರಿ ಮಳಿಗೆಗಳ ವಿಭಾಗ ಅರಣ್ಯ ಇಲಾಖೆಯ ವತಿಯಿಂದ ಅರ್ಜುನ ಸ್ಮರಣೆ ಮಾಡುವ ನಿಟ್ಟಿನಲ್ಲಿ ನಮ್ಮ ಅರ್ಜುನ ಗ್ಯಾಲರಿ ಸ್ಥಾಪಿಸಲು ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಡಿಸಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಶಿವರಾಜು ಮೂಲಕ ಮನವಿ ಮಾಡಲಾಯಿತು.

ಸತತ 9 ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಅರ್ಜುನ ಆನೆ ಕಳೆದ ವರ್ಷ ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿತ್ತು. 2019ರಲ್ಲಿ ದಸರಾದಿಂದ ನಿವೃತ್ತಿ ಪಡೆದಿದ್ದ ಅರ್ಜುನ ಕಳೆದ ವರ್ಷದ ದಸರಾದಲ್ಲಿ ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸಿ ಸೇವೆಸಲ್ಲಿಸಿದೆ. ಈ ವರ್ಷವೂ ನಿಶಾನೆ ಆನೆಯಾಗಿ ಭಾಗಿಯಾಗುವ ನಿರೀಕ್ಷೆ ಇತ್ತು.

ರಾಜ್ಯ ಸರ್ಕಾರ ಸಕಲೇಶಪುರದ ಅರಣ್ಯ ಪ್ರದೇಶದಲ್ಲಿ ಅರ್ಜುನ ಆನೆಯ ಅಂತ್ಯಕ್ರಿಯೆಯನ್ನು ಮಾಡಿದ್ದು, ಸಮಾಧಿ ಸ್ಥಳದಲ್ಲಿ ಹಾಗೂ ಅರ್ಜುನನ ವಾಸಸ್ಥಳವಾಗಿದ್ದ ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಈವರೆಗೂ ಸ್ಮಾರಕ ನಿರ್ಮಾಣದ ಕಾಮಗಾರಿಯೇ ಪ್ರಾರಂಭವಾಗಿಲ್ಲ. ಅರ್ಜುನ ದಸರಾದಲ್ಲಿ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿ ದೇಶವಿದೇಶದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ. ಇಂತಹ ಆನೆಗೆ ಗೌರವ ಸೂಚಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ಈ ಬಾರಿಯ ದಸರಾ ಮಹೋತ್ಸವದಲ್ಲಿ ಅರ್ಜುನ ಆನೆಯ ಸ್ತಬ್ಧಚಿತ್ರ ಪ್ರದರ್ಶಿಸುವ ಮೂಲಕ ಅರ್ಜುನನ ಸ್ಮರಿಸಬೇಕು ಎಂದು ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದರು

ಹಾಗೆಯೇ 90 ದಿನಗಳು ನಡೆಯುವ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದ ಸರ್ಕಾರಿ ಮಳಿಗೆ ವಿಭಾಗ ಅರಣ್ಯ ಇಲಾಖೆಯ ವತಿಯಿಂದ ಅರ್ಜುನ ಆನೆಯ ಸೇವೆ, ಭಾವಚಿತ್ರ ಮಾಹಿತಿಯುಳ್ಳ ‘ನಮ್ಮ ಅರ್ಜುನ’ ಸ್ಮರಿಸುವ ಗ್ಯಾಲೆರಿ ವಲಯ ನಿರ್ಮಿಸಲು ಕ್ರಮಕೈಗೊಳ್ಳಲಿ   ಎಂದು ಮನವಿ ಸಲ್ಲಿಸಿದರು

ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ, ಸಾಮಾಜಿಕ ಹೋರಾಟಗಾರ ನೆದರ್ಬಾದ್ ಚರಣ್ ರಾಜ್, ಬೈರತಿ ಲಿಂಗರಾಜು, ಸುಚೇಂದ್ರ, ಚಕ್ರಪಾಣಿ, ಮೋಹನ್ ಕುಮಾರ್, ದುರ್ಗಾ ಪ್ರಸಾದ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಹಾಗೂ ಇನ್ನಿತರರು ಹಾಜರಿದ್ದರು

Key words: KMPK Trust, commemorate, Arjuna, Mysore Dasara