ಪ್ಯಾಲೆಸ್ತೈನ್ ಧ್ವಜ ಹಾರಾಟ : ಮಲೆನಾಡು ಭಯೋತ್ಪಾದಕ ಸ್ಲೀಪರ್ ಸೆಲ್ ಗಳ ತಾಣವಾಗುತ್ತಿದೆ- ಸಿ.ಟಿ ರವಿ ಕಿಡಿ.

ಮೈಸೂರು,ಸೆಪ್ಟಂಬರ್,16,2024 (www.justkannada.in):  ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಮಲೆ ನಾಡು ಭಯೋತ್ಪಾದಕ ಸ್ಲೀಪರ್ ಸೆಲ್ ಗಳ ತಾಣವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ,  ಈ ಹಿಂದೆ ಸಹ ಕೊಪ್ಪದಲ್ಲಿ ಯಾಸಿನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಅದನ್ನ ಪತ್ತೆ ಹಚ್ಚಿದ್ದು ಭಜರಂಗದಳ. ಇದು ದೇಶಕ್ಕೆ ಅಪಾಯಕಾರಿ, ಇದರ ಹಿಂದಿನ ಜಾಲವನ್ನು ತನಿಖೆಯಿಂದ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಬಿಟ್ಟು ಕಳಿಸಿರುವುದು ಖಂಡನೀಯ

ಆರೋಪಿಗಳನ್ನ ಬಿಟ್ಟು ಕಳಿಸಿದ್ದಕ್ಕೂ ಆಕ್ರೋಶ ವ್ಯಕ್ತಪಡಿಇದ ಸಿ.ಟಿ ರವಿ, ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ಕಿಡಿಗೇಡಿಗಳನ್ನ ಬಂಧಿಸಬೇಕಿತ್ತು. ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಬಿಟ್ಟು ಕಳಿಸಿರುವುದು ಖಂಡನೀಯ. ಇದೇ ರೀತಿ ಆದರೆ ಮುಂದಿನ ದಿನಗಳಲ್ಲಿ ಹಿಂದುಗಳಿಗೆ ಉಳಿಗಾಲವಿಲ್ಲ ಎಂದು ಹರಿಹಾಯ್ದರು.

ಹಿಂದೂಗಳಿಗೆ ಸವಾಲು: ಇದು ಭಾರತದ ದೇಶಕ್ಕೆ ಹಾಕಿರುವ ಸವಾಲು.

ಮಂಗಳೂರು ಬಿ.ಸಿ ರೋಡ್ ನಲ್ಲಿ ಹಿಂದೂಗಳಿಗೆ ಸವಾಲಾಕಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಇದು ಭಾರತದ ದೇಶಕ್ಕೆ ಹಾಕಿರುವ ಸಾವಲು. ಯುದ್ಧವನ್ನ ನಾವು ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ. ಹಿಂದೆ ನಮ್ಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು. ಯುದ್ಧಕ್ಕೆ ಸವಾಲು ಹಾಕಿದಾಗ ಯುದ್ಧದ ಮೂಲಕವೇ ಗೆಲ್ಲಬೇಕು. ಸಲಹೇ ಎಲ್ಲಾ ಕೆಲಸ ಮಾಡಲ್ಲ. ನಾವು ಸಹ ಕತ್ತಿಯಿಂದಲೇ ಉತ್ತರ ಕೊಡುತ್ತೇವೆ ಇಲ್ಲವಾದರೇ ನಮ್ಮ ದೇಶ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ. ಅದಕ್ಕೆ ನಾವು ಅವಕಾಶ ಕೊಡಬಾರದು ಎಂದರು.

ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ

ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದೆ . ಹನಮಂತಪ್ಪ ಆಡಿಯೋಯಿಂದ ಇದು ಸಾಭೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ತಮ್ಮ ಪಕ್ಷದವರಿಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ ಅನ್ನೋ ನೀತಿ ಅನುಸರಿಸುತ್ತಿದ್ದಾರೆ ಕಾಂಗ್ರೆಸ್ ಶಾಸಕನ ಚೆನ್ನರೆಡ್ಡಿ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆತನನ್ನ ಬಂಧಿಸುವ ಬದಲು ಸಿಎಂ ತಮ್ಮ ಮನೆಯಲ್ಲಿ  ಬಿರಿಯಾನಿ ಊಟ ಹಾಕಿಸಿದ್ದಾರೆ. ಕೃಷಿ ಸಚಿವರ ಚಲುವರಾಯಸ್ವಾಮಿ, ನಾಗೇಂದ್ರ ಸೇರಿ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿದೆ. ಯಾರನ್ನ ಬಂಧಿಸುವ ಕೆಲಸ ಮಾಡಿಲ್ಲ. ಮುನಿರತ್ನ ವಿರುದ್ದ ಎಫ್ ಐ ಆರ್ ದಾಖಲಾದ ದಿನವೇ ಬಂಧಿಸಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಎಫ್ ಎಸ್ ಎಲ್ ವರದಿ ಬರುವ ಮುನ್ನವೇ ಮುನಿರತ್ನ ಬಂಧಿಸಿದ್ದು ಏಕೆ.? ಎಂದು ಪ್ರಶ್ನಿಸಿದರು.

ಮಂಡ್ಯದಲ್ಲಿ‌ ಶೇ. 90 ರಷ್ಟು ಹಿಂದುಗಳು: ‌ ನೀನು ಎಂದರೆ ನಿಮ್ಮಪ್ಪ ಅನ್ನುವ ಜನ ಇದ್ದಾರೆ‌

ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಪ್ರಕರಣದ ಹಿಂದೆ ಹೊರಗಿನ ಶಕ್ತಿ ಕೆಲಸ ಮಾಡಿದೆ ಎಂಬ ಅನುಮಾನ ನನಗೆ ಇತ್ತು. ಕೇರಳದವರ ಹೆಸರು ಬಹಿರಂಗವಾಗಿರುವುದರಿಂದ ಅದು ಸಾಭೀತಾಗಿದೆ ಸಂಪೂರ್ಣ ತನಿಖೆಯನ್ನ ಎನ್ಐಎ ಗೆ ವಹಿಸಬೇಕು. ಮಂಡ್ಯದಲ್ಲಿ‌ ಶೇ 90 ರಷ್ಟು ಹಿಂದುಗಳಿದ್ದಾರೆ‌ ನೀನು ಎಂದರೆ ನಿಮ್ಮಪ್ಪ ಅನ್ನುವ ಜನ ಇದ್ದಾರೆ‌ ಅಂತಹ ಕಡೆ ಈ ರೀತಿ ಕೃತ್ಯ ಮಾಡಿರುವುದು ಪೂರ್ವ ನಿಯೋಜಿತ ಎಂದರು.

ಪೊಲೀಸರಿಗೆ ಮುಸ್ಲೀಂರ ವಿರುದ್ದ ಕ್ರಮ ಕೈಗೊಳ್ಳಬೇಡಿ ಅಂತ ಸೂಚನೆ ನೀಡಲಾಗಿದೆ

ಗಲಾಟೆಗಿಂತ ಹೆಚ್ಚಾಗಿ ಭಯದ ವಾತಾವರಣ ನಿರ್ಮಾಣ ಮಾಡಬೇಕು, ಆತಂಕ ಸೃಷ್ಟಿ ಮಾಡಬೇಕು, ಗಲಭೆ ಮಾಡಿ ನಷ್ಟ ಉಂಟು ಮಾಡಬೇಕು ಎಂಬುದು ಅವರ ಉದ್ದೇಶ. ಪ್ರಕರಣದಲ್ಲಿ ಪೊಲೀಸರು ಅಸಹಾಯಕರ ರೀತಿ ನಿಂತಿದ್ದು ವಿಡಿಯೋ ಸಾಕ್ಷಿ ಲಭ್ಯ ಆಗಿದೆ. ಪೊಲೀಸರಿಗೆ ಮುಸ್ಲೀಂರ ವಿರುದ್ದ ಕ್ರಮ ಕೈಗೊಳ್ಳಬೇಡಿ ಅಂತ ಸೂಚನೆ ನೀಡಲಾಗಿದೆ. ಆ‌ ಸೂಚನೆ ನೀಡಿದವರು ಯಾರು ಅನ್ನೊದು ಬಹಿರಂಗವಾಗಬೇಕಿದೆ. ಈ ಎಲ್ಲಾ ಕಾರಣಕ್ಕೆ ನಾಗಮಂಗಲ ಪ್ರಕರಣದ ಸಂಪೂರ್ಣ ತನಿಖೆಯನ್ನ ಎನ್ಐಎಗೆ ವಹಿಸಬೇಕು ಎಂದು ಸಿ.ಟಿ ರವಿ ಆಗ್ರಹಿಸಿದರು.

ನಾವು ಧ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ,  ಸಿದ್ದರಾಮಯ್ಯ ನುಡಿದಂತೆ ಯಾವತ್ತು ನಡೆದುಕೊಂಡಿಲ್ಲ. ಅವರು ಹೇಳೋದೊಂದು,ಮಾಡೋದೊಂದು. ಅವರ ನಡೆಗೂ ನುಡಿಗೂ ಸಾಕಷ್ಟು ವ್ಯತ್ಯಾಸ ಇದೆ. ಹಾಗಾಗಿ ಸಿದ್ದರಾಮಯ್ಯ ಮಾತನ್ನ ಯಾರು ಕೇಳುವುದಿಲ್ಲ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ಮುನಿರತ್ನ ಅವರ ಬಂಧನ, ಸ್ವಪಕ್ಷೀಯರ ರಕ್ಷಣೆ ಮಾಡುವುದರಿಂದಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

Key words: Palestine Flag, terrorist, sleeper cells, CT Ravi