ನಾಗನಾರ್ ಉಕ್ಕು ಕಾರ್ಖಾನೆಯಲ್ಲಿ ಸಮಸ್ಯೆ: ಶೀಘ್ರದಲ್ಲೇ ಸರಿಪಡಿಸುತ್ತೇವೆ – ಕೇಂದ್ರ ಸಚಿವ ಹೆಚ್.ಡಿಕೆ

ರಾಯಪುರ,ಸೆಪ್ಟಂಬರ್,16,2024 (www.justkannada.in):  ನಾಗನಾರ್ ನಲ್ಲಿರುವ ರಾಷ್ಟ್ರೀಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕೆಲವು ಸಮಸ್ಯೆಗಳಿವೆ. ಶೀಘ್ರವೇ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನಾಗನಾರ್ ನಲ್ಲಿರುವ ರಾಷ್ಟ್ರೀಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭೇಟಿ ನೀಡಿ  ಸಂಜೆ ರಾಯಪುರಕ್ಕೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಉಕ್ಕು ಸಂಗ್ರಹ, ಸಾಗಣೆ, ಮಾರುಕಟ್ಟೆ ಸೇರಿ ಕೆಲ ಸಮಸ್ಯೆಗಳನ್ನು ಕಾರ್ಖಾನೆ ಎದುರಿಸುತ್ತಿದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದೇನೆ. ಸಂಬಂಧಪಟ್ಟ ಸಚಿವಾಲಯ, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತೇನೆ ಎಂದರು.

ನಾಗನಾರ್ ಕಾರ್ಖಾನೆ ದೇಶದಲ್ಲಿ ಅತ್ಯುತ್ತಮ ಉಕ್ಕು ತಯಾರಿಕಾ ಘಟಕಗಳಲ್ಲಿ ಒಂದು. ಆರಂಭವಾದ ಒಂದೇ ವರ್ಷದಲ್ಲಿ ಒಂದು ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಿದೆ. ಹೀಗಾಗಿ ಈ ಘಟಕಕ್ಕೆ ಉತ್ಪಾದನಾ ಕ್ಷಮತೆ ಇದೆ. ಹೀಗಾಗಿ ಕೆಲ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬಿಲಾಯ್ ಕಾರ್ಖಾನೆಗೆ ಬೆಳಗ್ಗೆ ಭೇಟಿ:

ಸೋಮವಾರ ರಾತ್ರಿ ರಾಯಪುರದಲ್ಲಿ ವಾಸ್ತವ್ಯ ಹೂಡಿರುವ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಮಂಗಳವಾರ ಬೆಳಗ್ಗೆ ಬಿಲಾಯ್ ಉಕ್ಕು ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ.

Key words: Problem, Naganar Steel Factory, solution, Union Minister, HDK