ವಾಲ್ಮೀಕಿ ನಿಗಮ ಅಧಿಕಾರಿ ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ರೂ. ಸಹಾಯಧನ ಬಿಡುಗಡೆ

ಬೆಂಗಳೂರು,ಸೆಪ್ಟಂಬರ್,24,2024 (www.justkannada.in):  ಆತ್ಮಹತ್ಯೆಗೆ ಶರಣಾಗಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ.

ಈ ಕುರಿತು ಸಿಎಂ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಮಾನ್ಯ ಮುಖ್ಯಮಂತ್ರಿಯವರು ದಿನಾಂಕ: 19-07-2024 ರಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಕಛೇರಿ ಅಧೀಕ್ಷಕರಾದ ದಿವಂಗತ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದರು.

ದಿನಾಂಕ:18.09.2024ರ ಸರ್ಕಾರದ ಆದೇಶದಂತೆ ದಿ.  ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ. ಈ ಸಂಬಂಧ ಮೃತರ ಪತ್ನಿ ಕವಿತಾ  ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ. ಖಜಾನೆ ಬಿಲ್ ಸಲ್ಲಿಸಲಾಗಿದ್ದು, ಇಂದು ಸಂಜೆ 4.30ರ ಒಳಗಾಗಿ ಕವಿತಾ ರವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಶಿವಮೊಗ್ಗ ಜಿಲ್ಲೆ ವಿನೋಬನಗರ ಪೋಲಿಸ್ ಠಾಣೆ ಅಪರಾಧ ಸಂಖ್ಯೆ:83/2024 ಕಲಂ 360 ರೆ/ವಿ 34 ಐಪಿಸಿ ಹಾಗೂ ಕಲಂ:3(2)(v) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆ-1989ರಡಿ ಸಿಐಡಿಯ ವಿಶೇಷ ತನಿಖಾ ತಂಡ(Special Investigation Team)ವು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುವ ಹಿನ್ನಲೆಯಲ್ಲಿ ದೌರ್ಜನ್ಯ ನಿಷೇಧ ಕಾಯ್ದೆಯ ನಿಯಮಗಳಂತೆ ರೂ.8.25 ಲಕ್ಷಗಳನ್ನು ದಿ.ಚಂದ್ರಶೇಖರನ್ ಪಿ ಇವರ ಪತ್ನಿ ತಿ ಕವಿತಾ ರವರಿಗೆ ಮಂಜೂರು ಮಾಡಲಾಗಿದೆ.

ಚಂದ್ರಶೇಖರನ್ ಪಿ ಇವರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಿಂದ ಪಾವತಿಸಬೇಕಾದ ಸಂಬಳ ಮತ್ತು ರಜೆ ನಗದೀಕರಣಗಳಿಗೆ ಸಂಬಂಧಿಸಿದ ರೂ.1,41,361ಗಳನ್ನು ಈಗಾಗಲೇ ಕವಿತಾ ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಹಾಗೆಯೇ ಮೃತರ ಮಗನಿಗೆ ಉದ್ಯೋಗ ನೀಡುವ ಕುರಿತು ಕ್ರಮವಹಿಸಲಾಗುತ್ತಿದೆ ಎಂದು ಸಿಎಂ ಕಚೇರಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Key words: Valmiki corporation officer,  Chandrasekhar, family, 25 lakhs, Release