ಅರಣ್ಯ, ಪರಿಸರ, ವನ್ಯಜೀವಿ ಸಂರಕ್ಷಣೆಗೆ ಆಂಧ್ರ, ಕರ್ನಾಟಕ ಪರಸ್ಪರ ಸಹಕಾರ: ಸಚಿವ ಈಶ್ವರ್ ಖಂಡ್ರೆ

 ವಿಜಯವಾಡ, ಸೆಪ್ಟಂಬರ್, 27,2024 (www.justkannada.in):  ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಡೀ ಜಗತ್ತಿನ ಸಂಪತ್ತಾಗಿದ್ದು, ಇವುಗಳ ಸಂರಕ್ಷಣೆಗೆ ಎಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳಲ್ಲಿ ವನ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಒಗ್ಗೂಡಿ ಶ್ರಮಿಸಲಿವೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ವಿಜಯವಾಡದ ಲೆಮನ್ ಟ್ರೀ ಹೊಟೆಲ್ ನಲ್ಲಿಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು,  ಪರಿಸರ, ಅರಣ್ಯ ಮತ್ತು ವನ್ಯಜೀವಿ ನಿರ್ವಹಣೆಯಲ್ಲಿ ಹಲವು ಪ್ರಮುಖ ಸವಾಲುಗಳಿದ್ದು, ಇವುಗಳನ್ನು  ಎದುರಿಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಅರಣ್ಯ ಇಲಾಖೆಗಳು ಒಗ್ಗೂಡಿವೆ ಎಂದು ತಿಳಿಸಿದರು.

ಇಂದು ಹಲವು ತಿಳಿವಳಿಕೆ ಮಹತ್ವದ ಒಪ್ಪಂದಗಳಿಗೆ ಪವನ್ ಕಲ್ಯಾಣ್ ಮತ್ತು ತಮ್ಮ ಸಮ್ಮುಖದಲ್ಲಿ ಸಹಿ ಹಾಕಲಾಗುತ್ತಿದ್ದು, ಇದರಲ್ಲಿ ವನ್ಯಜೀವಿಗಳನ್ನು ರಕ್ಷಿಸಲು, ನಮ್ಮ ಕಾಡುಗಳನ್ನು ಸಂರಕ್ಷಿಸಲು ಮತ್ತು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನ ಸಮುದಾಯಗಳು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳನ್ನು ತಗ್ಗಿಸಲು ಸಾಮೂಹಿಕ ಪ್ರಯತ್ನ ಮಾಡುವ ಸಂಕಲ್ಪವೂ ಸೇರಿದೆ ಎಂದರು.

ಈ ತಿಳಿವಳಿಕೆ ಒಪ್ಪಂದಗಳಿಂದ ಕರ್ನಾಟಕ ಗಡಿ ಭಾಗದಲ್ಲಿ ಮಾನವ-ಆನೆ ಸಂಘರ್ಷ ತಗ್ಗುವುದಲ್ಲದೆ, ವನ್ಯಜೀವಿಗಳ ಅಕ್ರಮ ಬೇಟೆ, ಕಳ್ಳಸಾಗಣೆಗೂ ಕಡಿವಾಣ ಬೀಳಲಿದೆ. ಜೊತೆಗೆ ಅರಣ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ನಿಯೋಜನೆಯಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಆಂಧ್ರಪ್ರದೇಶದ ಚಿತ್ತೂರು, ಪಾರ್ವತಿಪುರಂ ಮನ್ಯಾಮ್ ಗಳಲ್ಲಿ ಮಾನವ – ಆನೆ ಸಂಘರ್ಷ ಹೆಚ್ಚಾಗಿದ್ದು, ಇವುಗಳನ್ನು ಸೆರೆ ಹಿಡಿಯಲು ರಾಜ್ಯದಿಂದ 4 ಕುಮ್ಕಿ ಆನೆಗಳನ್ನು ನೀಡಲಾಗುತ್ತಿದೆ. ಇವುಗಳ ಸುರಕ್ಷಿತ ನಿರ್ವಹಣೆಯ ಖಾತ್ರಿಯನ್ನು ಆಂಧ್ರಪ್ರದೇಶ ನೀಡಿದೆ. ಜೊತೆಗೆ ಈ ಆನೆಗಳನ್ನು ಬಳಸುವ, ಇವುಗಳ ನೆರವಿನಿಂದ ಪುಂಡಾನೆ ಸೆರೆ ಹಿಡಿಯುವ ಮತ್ತು ಪಳಗಿಸುವ ಬಗ್ಗೆ ಆಂಧ್ರದ ಮಾವುತರಿಗೆ, ಅಧಿಕಾರಿಗಳಿಗೆ ಮತ್ತು ಪಶುವೈದ್ಯರಿಗೆ ತರಬೇತಿ ನೀಡಲಾಗುವುದು. ಆ ಮೂಲಕ ಆಂಧ್ರಪ್ರದೇಶ ಆನೆ ಸೆರೆ ಕಾರ್ಯಾಚರಣೆಯಲ್ಲಿ ಸ್ವವಲಂಬಿಯಾಗಲು ಸಹಕರಿಸಲಾಗುವುದು ಎಂದರು.

ಕರ್ನಾಟಕವು ಅರಣ್ಯ ನಿರ್ವಹಣೆಯಲ್ಲಿ ಹಲವಾರು ಮಾಹಿತಿ ತಂತ್ರಜ್ಞಾನ -ಐಟಿ ಉಪಕ್ರಮಗಳನ್ನು ಪ್ರಾರಂಭಿಸಿದೆ, ಇದು ವನ್ಯಜೀವಿಗಳ ಮೇಲ್ವಿಚಾರಣೆ, ಕಾನೂನುಬಾಹಿರ ಚಟುವಟಿಕೆ ತಡೆಗೆ ಸಹಕಾರಿಯಾಗಿದ್ದು, ಒಟ್ಟಾರೆ ಅರಣ್ಯ ನಿರ್ವಹಣೆ ಆಡಳಿತವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇವುಗಳ ಬಲವರ್ಧನೆಗೆ ಎರಡೂ ರಾಜ್ಯಗಳು ಶ್ರಮಿಸಲಿವೆ ಎಂದರು.

ನಮ್ಮ ಎರಡೂ ರಾಜ್ಯಗಳ ನಡುವಿನ  ಪಾಲುದಾರಿಕೆಯ ಮೂಲಕ, ಕರ್ನಾಟಕವು ಆಂಧ್ರಪ್ರದೇಶದೊಂದಿಗೆ ಸಹಕರಿಸಿ ಪರಿಸರ ಪ್ರವಾಸೋದ್ಯಮ ಉಪಕ್ರಮಗಳನ್ನು ಬಲಪಡಿಸುತ್ತದೆ, ಇದು ಜನರಿಗೆ ಪ್ರಯೋಜನವನ್ನು ನೀಡುವುದಲ್ಲದೆ ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಈ ಸಹಯೋಗವು ಇತರ ರಾಜ್ಯಗಳಿಗೆ ಮಾದರಿಯಾಗಲಿದೆ. ನೆರೆ ಹೊರೆ ರಾಜ್ಯಗಳ ನಡುವೆ ಸೌಹಾರ್ದತೆ, ಸಹಕಾರ, ಸಹಯೋಗ ಇದ್ದಲ್ಲಿ ಸಮಸ್ಯೆಗಳನ್ನು ಸುಲಭವಾಗಿ ಮತ್ತು ಸುಗಮವಾಗಿ ಪರಿಹರಿಸಬಹುದು ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ತೆಲುಗು ಕವನ ವಾಚಿಸಿದ ಸಚಿವ ಈಶ್ವರ್ ಖಂಡ್ರೆ

ಇದೇ ವೇಳೆ ಸಚಿವ ಈಶ್ವರ್ ಖಂಡ್ರೆ ತೆಲುಗು ಕವನವನ್ನ ವಾಚಿಸಿದರು.

ಅರಣ್ಯ ಗೊಪ್ಪತನಂ.. .

ಅರಣ್ಯಮಾ   ನೀ     ಗೊಪ್ಪತನಂ ಎಂತ?

ಪಚ್ಚನಿ    ಆಕಾಶಂ,  ಕಿಂದ  ಪಸಿಡಿ ಬಂಗಾರು ಭೂಮಿ,

ವೃಕ್ಷಾಲ ನಾಟ್ಯಮೆ  ನಿತ್ಯಕ್ರೀಡಗಾ,

ಜೀವಜಾಲಂ   ಸಂತೋಷಿಂಚೆ   ಜೀವನಾಧಾರ…

ಪಕ್ಷುಲ ಕಿಲಕಿಲ, ರಾಗಾಲು ವಿನಿಪಿಂಚಗಾ,

ಜಂತುವುಲ ಪಯನಂ  ಮೌನ   ಗೀತಗಾ…

ನುವ್ವು ನಿಲೋ ದಾಗುನ್ನ ಜೀವನ ರಹಸ್ಯಂ.

ಸಮಸ್ಯಲಕು ಸಮಾಧಾನಂ ನಿರ್ಪಿಸ್ತುನ್ನಾವು..

ಪ್ರಕೃತಿನಿ ಪ್ರೇಮಿಂಚು, ರಕ್ಷಿಂಚು, ನಿಶ್ಶಬ್ದಮಂದು,

ಪ್ರಪಂಚಾನಿಕಿ ಪ್ರಕಾಶಂ ಚೂಪು..

ಅರಣ್ಯ ಜೀವಂ ಸಮರ್ಥ್ಯಮೈ ನಿಲಿಪೆ,  ಪರಿಸರಾಲನು ಕಾಪಾಡೆ ಮಹಾ ನಿಲಯಂ…

 

ಅರಣ್ಯದ ಶ್ರೇಷ್ಠತೆ

ಒ ಅರಣ್ಯವೇ, ನೀನೆಷ್ಟು ಶ್ರೇಷ್ಠ?

ಹಸಿರು ಆಕಾಶದ ಕೆಳಗೆ, ಬಂಗಾರದ ಭೂಮಿ,

ಇಲ್ಲಿ ವೃಕ್ಷಗಳ ನಾಟ್ಯವು ನಿತ್ಯ ಕ್ರೀಡೆಯಾಗಿದೆ,

ಜೀವಜಾಲ ಸಂತೋಷವಾಗಿದ್ದರೇ ಜೀವನಾಧಾರ,

ಪಕ್ಷಿಗಳ ಕಲರವ, ರಾಗದಂತೆ ಅಣುರಣಿಸುತ್ತದೆ,

ಪ್ರಾಣಿಗಳ ನಿಶ್ಶಬ್ದ ಸಂಚಾರ, ಮೌನಗೀತೆಯಾಗಿದೆ

ನೀನು ನಿನ್ನೊಳಗೆ ಜೀವನ ರಹಸ್ಯವನ್ನೇ ಇಟ್ಟುಕೊಂಡಿರುವೆ,

ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತಿರುವೆ,

ಪರಿಸರ,  ಅರಣ್ಯ ರಕ್ಷಿಸಿದರೆ ಇದುವೆ ಮಹಾ ನಿಲಯ ಎಂದು ಈಶ್ವರ್ ಖಂಡ್ರೆ ಹೇಳಿದರು.

Key words: Andhra, Karnataka, cooperation, forest environment, Minister, Ishwar Khandre