ಸಿಎಂ ಪತ್ನಿಯಿಂದ ಸೈಟ್ ವಾಪಸ್ ಕ್ರಮ ಸರಿಯಿದೆ ಎಂದ ಟಿ.ಜೆ ಅಬ್ರಾಹಂ

ಮೈಸೂರು, ಅಕ್ಟೋಬರ್,4,2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 14 ಸೈಟ್ ಗಳನ್ನ ವಾಪಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದೂರುದಾರ ಟಿ.ಜೆ ಅಬ್ರಾಹಂ, ಕಾನೂನು ಪ್ರಕಾರ ಸೈಟ್ ವಾಪಸ್ ಕ್ರಮ ಸರಿಯಿದೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಟಿ.ಜೆ ಅಬ್ರಾಹಂ,  ನಾನು ಈ ಹಿಂದೆಯೇ ಸೈಟು ವಾಪಸ್ ಪಡೆದುಕೊಳ್ಳಿ ಅಂತ ಹೇಳಿದ್ದೆ. ಮನವಿ ಪತ್ರ ಕೂಡ ಕೊಟ್ಟಿದ್ದೆ. ಈಗ ಮುಡಾ ಸೈಟು ವಾಪಸ್ ಪಡೆದುಕೊಂಡಿದೆ ಅದಕ್ಕೆ ಧನ್ಯವಾದ ಹೇಳಲು ಬಂದಿದ್ದೆ. ಕಾನೂನು ಪ್ರಕಾರ ಸೈಟ್ ವಾಪಸ್ ಕ್ರಮ ಸರಿಯಿದೆ ಎಂದರು.

ಲೋಕಾಯುಕ್ತ ಮೇಲೆ ವಿಶ್ವಾಸವಿದೆ . ಸರಿಯಾದ ರೀತಿಯಲ್ಲಿ ತನಿಖೆ ಆಗತ್ತೆ. ನನಗೆ ಸಿಬಿಐ ಆಗಲಿ ಯಾವುದೇ ತನಿಖೆ‌ಬೇಡ. ನನಗೆ ಸಿಐಡಿ ತನಿಖೆ ಮಾಡಿದರೂ ಓಕೆ. ಸಿಎಂ ರಾಜೀನಾಮೆ ನೀಡಲೇಬೇಕು. ನಾನು ಐವರು ಸಿಎಂ ವಿರುದ್ಧ ಹೋರಾಟ ಮಾಡಿದ್ದೇನೆ. ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಬಿಎಸ್ ವೈ, ಸಿದ್ದರಾಮಯ್ಯ ವಿರುದ್ದವೂ ಕೂಡ ಹೋರಾಟ ಮಾಡಿದ್ದೇನೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ. ನನ್ನ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ. ಹೈಕೋರ್ಟ್ , ಸುಪ್ರೀಂಕೋರ್ಟ್ ಎಲ್ಲಾ ಕಡೆ ತೆಗೆದುಕೊಂಡು‌ ಹೋಗುತ್ತೇನೆ ಎಂದರು.

ಶಾಸಕ‌ ಜಿ.ಟಿ.ದೇವೇಗೌಡರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಟಿ.ಜೆ ಅಬ್ರಾಹಂ,  ರಾಜಕಾರಣಿಗಳ ಬಗ್ಗೆ ನಾನು ಮಾತನಾಡಲ್ಲ. ಹಿಂದೆ ತುಳಸಿದಾಸಪ್ಪನವರು ಸಣ್ಣ ಆರೋಪಕ್ಕೆ ರಾಜೀನಾಮೆ ನೀಡಿದ್ದರು. ಅಂತಹ ಮಹಾನ್ ವ್ಯಕ್ತಿಗಳಿದ್ದ ಊರಿನವರು ಅರ್ಥ ಮಾಡಿಕೊಳ್ಳಬೇಕು. ಇಂದು ರಾಜಕಾರಣಿಗಳಿಗೆ ಬದ್ಧತೆ ಇಲ್ಲ ಎಂದು ಜಿ.ಟಿ ದೇವೇಗೌಡರಿಗೆ ಚಾಟಿ ಬೀಸಿದರು.

Key words:  return, site, CM’s wife, muda, T.J Abraham