ನಿಮಗೊಂದು ಕಾನೂನು ನನಗೊಂದು ಕಾನೂನಾ? ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ- ಸಿಎಂಗೆ ಕೆ.ಎಸ್ ಈಶ್ವರಪ್ಪ ಆಗ್ರಹ

ಮೈಸೂರು,ಅಕ್ಟೋಬರ್,14,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ,  ನನ್ನ ಮೇಲೆ ಆರೋಪ ಬಂದಾಗಲೂ ರಾಜೀನಾಮೆ ನೀಡಿದ್ದೆ. ಸಿದ್ದರಾಮಯ್ಯ ಕೂಡ ಈಗ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನನ್ನ ಮೇಲೆ ತನಿಖೆ ಆಯ್ತು ಕ್ಲಿನ್ ಚಿಟ್ ಕೂಡ ಸಿಕ್ಕಿತು. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಆರೋಪ ಬಂದಿದೆ. ನೀವೇಕೆ ರಾಜೀನಾಮೆ ನೀಡುತ್ತಿಲ್ಲ. ನಿಮಗೊಂದು ಕಾನೂನು ನನಗೊಂದು ಕಾನೂನು ಇದೆಯಾ? ನನ್ನ ವಿರುದ್ಧ ನೀವೇ ಹೋರಾಟ ಮಾಡಿದ್ರಿ. ಸಿಎಂ ಡಬಲ್ ಸ್ಟ್ಯಾಂಡ್ ತಕೋಬೇಡಿ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ಕ್ಲಿನ್ ಚಿಟ್ ಸಿಕ್ರೆ ಮತ್ತೆ ಸಿಎಂ ಆಗಿ ಎಂದು ಹೇಳಿದರು.

ಮೈಸೂರಿಗೆ ಬರಬೇಕು ಅನಿಸಿದ್ದಾಗ ನನಗೆ ನೆನಪಾಗಿದ್ದು. ಸಿಎಂ ಸಿದ್ದರಾಮಯ್ಯ ಸವದತ್ತಿ ಯಲ್ಲಮ್ಮನ ಪೂಜೆ ಮಾಡಿದ್ದಾರೆ. ಪಾರ್ವತಮ್ಮನವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಮೇಲಿಂದ ಮೇಲೆ ಚಾಮುಂಡೇಶ್ವರಿ ಬೆಟ್ಟಕ್ಕೆ ಪೂಜೆ ಸಲ್ಲಿಸುವ ಕೆಲಸ ಆಗುತ್ತಿದೆ. ನಿಮ್ಮ ಶ್ರೀಮತಿಯವರು ಸಾಕಷ್ಟು ಪೂಜೆ ಮಾಡಿಕೊಂಡು ಬಂದಿದ್ದಾರೆ.ನೀವು ಕೂಡ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸಿ, ಕುಂಕುಮ ಹಾಕಿಕೊಳ್ಳುವ ಕೆಲಸ ಮಾಡಿದ್ದೀರಾ ಎಂದರು.

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಯಾರು ದಂಗೆ ಎದ್ದರೋ ಪೋಲೀಸರ ಮೇಲೆ ಯಾರು ದೌರ್ಜನ್ಯ ಮಾಡಿದರೋ ಅವರ ಪ್ರಕರಣ ರದ್ದು ಮಾಡಲು ಮುಂದಾಗಿದ್ದೀರಿ. ಒಂದು ಕಡೆ ಪೂಜೆ ಸಲ್ಲಿಸಿ ಕುಂಕುಮ ಹಾಕಿಕೊಳ್ಳುತ್ತಿರಾ. ಮತ್ತೊಂದೆಡೆ ದೇವಸ್ಥಾನ ಧ್ವಂಸಕ್ಕೆ ಮುಂದಾದವರ ಪ್ರಕರಣ ರದ್ದು ಮಾಡಲು ಮುಂದಾಗಿರೋದನ್ನ ಸಹಿಸಲ್ಲ. ಈಗ ಸಿಎಂ ಪ್ರಾಮಾಣಿಕ ಪೂಜೆ ಮಾಡುತ್ತಿದ್ದಾರೆ. ವೋಟಿಗಾಗಿ ಓಲೈಕೆ ಮಾಡೋದು ಸರಿಯಲ್ಲ. ದೇಶದ್ರೋಹಿ, ಭಯೋತ್ಪಾದಕರ ಕೇಸ್ ವಾಪಸ್ ಪಡೆದಿರೋದು ಸರಿಯಲ್ಲ. ಸವದತ್ತಿ ಯಲ್ಲಮ್ಮ, ಚಾಮುಂಡೇಶ್ವರಿ ತಾಯಿ ಕ್ಷಮಿಸಲ್ಲ. ಮುಸಲ್ಮಾನರ ತುಷ್ಟಿಕರಣವೇ ಇದಕ್ಕೆಲ್ಲ ಕಾರಣ ಎಂದು ಕಿಡಿಕಾರಿದರು.

ಆರ್ ಎಸ್ಎಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಾತನಾಡುತ್ತಾರೆ. ದೇಶದ ರಕ್ಷಣೆ ದೇಶ ಸೇವೆ ಮಾಡುತ್ತಿರೋದು ಆರ್ ಎಸ್ಎಸ್. ಈ ಆರ್ ಎಸ್ಎಸ್ ಬಗ್ಗೆ ಟೀಕೆ ಮಾಡಿ ಮಾಡಿ ಕಾಂಗ್ರೆಸ್ ನಿರ್ನಾಮ ಆಗ್ತಿರೋದು ಎಂದು ವಾಗ್ದಾಳಿ ನಡೆಸಿದರು.

ಸಂಗೊಳ್ಳಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಂತಿಮವಾದ ತೀರ್ಮಾನ ಇನ್ನ ಆಗಿಲ್ಲ. ಬಾಗಲಕೋಟೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಈ ಸಮಾವೇಶಕ್ಕೆ ಮೃತ್ಯುಂಜಯ ಸ್ವಾಮಿ ಸೇರಿದಂತೆ ಹಲವರು ಬರುತ್ತಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: KS Eshwarappa, demands,  CM Siddaramaiah, resign