ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು  ಖರೀದಿಸಿದ ರೈತ ಮಹಿಳೆ

ಬೆಳಗಾವಿ, ಅಕ್ಟೋಬರ್​ 19,2024 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗೃಹಲಕ್ಷ್ಮೀ ಯೋಜನೆಯಿಂದ ಹತ್ತು ಹಲವು ಪ್ರಯೋಜನಗಳಾಗುತ್ತಿದೆ. ಇತ್ತೀಚೆಗೆ ಇದೇ ಹಣದಿಂದ ಫ್ರಿಡ್ಜ್ ಕೊಂಡುಕೊಂಡ ಬಗ್ಗೆ, ಮಹಿಳೆಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ ಬಗ್ಗೆ ಸುದ್ದಿಯಾಗಿತ್ತು. ಇದೀಗ ಗೃಹಲಕ್ಷ್ಮೀ ಯೋಜನೆ ಹಣದಿಂದ ರೈತ ಮಹಿಳೆಯೊಬ್ಬರು ಎತ್ತು ಖರೀದಿಸಿದ್ದಾರೆ.

ಹೌದು ಗೃಹಲಕ್ಷ್ಮೀ ಯೋಜನೆಯಡಿ ಬಂದ ಹಣದಿಂದ ಗೋಕಾಕ್ ತಾಲೂಕಿನ ತವಗ ಗ್ರಾಮದ ರೈತ ಮಹಿಳೆ ಬಸವ್ವ ಎಂಬುವವರು ಎತ್ತು ಖರೀದಿಸಿದ್ದಾರೆ. ತವಗ ಗ್ರಾಮದಲ್ಲಿ ಬಸವ್ವ ಮತ್ತು ಶಿವಪ್ಪ ದಂಪತಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಬೇಸಾಯಕ್ಕಾಗಿ ಒಂದೇ ಎತ್ತು ಇತ್ತು. ಇದೀಗ ಗೃಹಲಕ್ಷ್ಮೀ ಯೋಜನೆ ಅಡಿ ಬಂದ 22 ಸಾವಿರ ರೂ. ಹಣವನ್ನು ಕೂಡಿಟ್ಟು ಮತ್ತೊಂದು ಎತ್ತು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಕ್ಕಳಿಲ್ಲದ ಬಸವ್ವ, ಶಿವಪ್ಪ ದಂಪತಿ ಎತ್ತುಗಳನ್ನೇ ಮಕ್ಕಳಂತೆ ಸಾಕುತ್ತಿದ್ದಾರೆ. ಬೇಸಾಯವನ್ನೇ ನಂಬಿಕೊಂಡು ಜೀವನ  ನಡೆಸುತ್ತಿರುವ ದಂಪತಿಗೆ ಇದೀಗ ಗೃಹಲಕ್ಷ್ಮೀ ಹಣ ಅನುಕೂಲವಾಗಿದೆ.

ಇನ್ನು ಬಸವ್ವ ಮನೆಗೆ ಗೋಕಾಕ್ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಹಾಂತೇಶ್ ಕಡಾಡಿ ಭೇಟಿ ನೀಡಿ, ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದ್ದಾರೆ ಎನ್ನಲಾಗಿದೆ.

Key words: farmer, woman, bought, Oxen, Grihalakshmi Yojana, money