ಮುಡಾ ಹಗರಣ: ಸಿಎಂ ಪತ್ನಿ ಪಾರ್ವತಿ ವಿಚಾರಣೆ ಮುಕ್ತಾಯ

ಮೈಸೂರು,ಅಕ್ಟೋಬರ್,25,2024 (www.justkannada.in): ಮುಡಾ 50-50 ಹಗರಣಕ್ಕೆ ಸಂಬಂಧಿಸಿದಂತೆ ಇಂದು ಎರಡನೇ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ವಿಚಾರ ಸಂಬಂಧ ಇಂದು ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿ ಪಾರ್ವತಿ ಅವರನ್ನ ಲೋಕಾಯುಕ್ತ ಎಸ್‌.ಪಿ ಟಿಜೆ.ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ.

ಈಗಾಗಲೇ ಎ4, ಎ3 ಆರೋಪಿಗಳು ಸೇರಿದಂತೆ ಹಲವರನ್ನು ಕಚೇರಿಗೆ ಕರೆಸಿ ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದ್ದಾರೆ. ಇದೀಗ ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿ ಪಾರ್ವತಿ ಅವರನ್ನ ಲೋಕಾಯುಕ್ತ ಪೊಲೀಸರು ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.  14 ನಿವೇಶನ ವಾಪಸ್ ಸಂದರ್ಭ, ಖಾತೆ ಕ್ಯಾನ್ಸಲ್ ವೇಳೆ ಕೂಡ ಗೌಪ್ಯತೆ ಕಾಪಾಡಲಾಗಿತ್ತು. ಉಪ ನೊಂದಣಾಧಿಕಾರಿ ಪಾರ್ವತಿ ಇದ್ದಲ್ಲಿಯೇ ಹೋಗಿ ಕ್ಯಾನ್ಸಲೇಷನ್ ಕೆಲಸ ಮಾಡಿದ್ದರು.

ನಾಳೆಯೇ ಖುದ್ದು ಹಾಜರಗುವಂತೆ ನಿನ್ನೆ ಸಂಜೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಲೋಕಾಯುಕ್ತ ಎಸ್ಪಿ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನಲೆ ಖುದ್ದು ಎಸ್ಪಿ ಕಚೇರಿಗೆ ಪಾರ್ವತಿ ಅವರು ಆಗಮಿಸಿದ್ದರು.

ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದ ಪಾರ್ವತಿ ಅವರನ್ನು ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಸಿಎಂ ಪತ್ನಿ ಪಾರ್ವತಿ ಜೊತೆ ಸಹಾಯಕಿಯೊಬ್ಬರು ಆಗಮಿಸಿದ್ದರು. ಲೋಕ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಪಾರ್ವತಿ ಅವರು ಸಮರ್ಪಕ ಉತ್ತರ ನೀಡಿದ್ದು, ಪೂರಕ ದಾಖಲೆ ಜೊತೆಗೆ ಹೇಳಿಕೆ ನೀಡಿ ಸಿಎಂ ಪತ್ನಿ ಪಾರ್ವತಿ ಅವರು ತೆರಳಿದ್ದಾರೆ ಎನ್ನಲಾಗಿದೆ.

Key words: Muda scandal, CM wife, Parvati,  inquiry