ಬೆಂಗಳೂರು,ಫೆಬ್ರವರಿ,10,2025 (www.justkannada.in): ಎರಡು ವರ್ಷಗಳ ಹಿಂದೆ ಸರಕಾರದ ಆಯವ್ಯಯ ಮಂಡನೆಯ ವೇಳೆ ಘೋಷಿಸಿದ್ದ, ಆದರೆ ಚಾಲನೆಗೆ ಬಾರದೆ ನೆನೆಗುದಿಗೆ ಬಿದ್ದಿರುವ ಮಹಾತ್ಮಗಾಂಧಿ ವಸ್ತ್ರೋದ್ಯಮ ಯೋಜನೆ ಜಾರಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಿವಮೊಗ್ಗ ಜಿಲ್ಲೆ ಹೆಗ್ಗೋಡು ಶ್ರಮಜೀವಿ ಆಶ್ರಮದ ಗಾಂಧಿವಾದಿ, ನಾಟಕಕಾರ ಹಾಗೂ ರಂಗಕರ್ಮಿ ಪ್ರಸನ್ನ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಪ್ರಸನ್ನ ಅವರು, ಮಹಾತ್ಮ ಗಾಂಧಿ ವಸ್ತ್ರೋದ್ಯಮ’ಯೋಜನೆಯು ಕರ್ನಾಟಕದಲ್ಲಿ ಗಾಂಧಿವಾದಿಗಳ ಕನಸಾಗಿದೆ ಹಾಗೂ ಗ್ರಾಮೀಣ ಬಡಜನತೆಯ ಬಡತನ ನಿವಾರಣೆಗಿರುವ ಒಂದು ಶಾಶ್ವತ ಪರಿಹಾರ ಕಾರ್ಯಕ್ರಮವಾಗಿದೆ. ವಸ್ತ್ರೋದ್ಯಮ ಎಂಬ ಸೀಮಿತ ಹೆಸರು ಈ ಯೋಜನೆಗೆ ಅಂಟಿಕೊಂಡಿದ್ದರೂ ಸಹ ಇದು ಎಲ್ಲ ಕುಶಲಕರ್ಮಿ ಕ್ಷೇತ್ರಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ, ಪುನರುಜ್ಜೀವನ ನೀಡಬಲ್ಲ, ಆದರೆ ಸರ್ಕಾರದ ಬೊಕ್ಕಸಕ್ಕೆ ವಿಪರೀತ ಹೊರೆಯೂ ಆಗಲಾರದ, ಒಂದು ಜಾಣ ಯೋಜನೆಯಾಗಿದೆ.
ಬಡಜನತೆಗೆ ರಿಸರ್ವೇಶನ್ ನೀಡುವುದು ಅಥವಾ ಗ್ಯಾರಂಟಿ ನೀಡುವುದು ಒಳ್ಳೆಯ ಕೆಲಸವೇ ಹೌದಾದರೂ ಸಮಸ್ಯೆಗೆ ಅದೊಂದು ತಾತ್ಕಾಲಿಕ ಪರಿಹಾರ ಮಾತ್ರ. ಇನ್ನು ರಾಜಕೀಯವಾಗಿ ನೋಡುವುದಾದರೆ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರಕಾರದ ವಿಶೇಷ ಛಾಪು ಮೂಡಿಸಲಾರವು. ತಮ್ಮ ವಿರೋಧಿಗಳು ತಮಗಿಂತಲೂ ಮಿಗಿಲಾಗಿ ಗ್ಯಾರಂಟಿ ಒದಗಿಸಲು ತುದಿಗಾಲ ಮೇಲೆ ನಿಂತಿರುವುದು ಈಗ ಸ್ಪಷ್ಟವಿದೆ. ಈ ಎಲ್ಲ ಉತ್ತಮಾಂಶಗಳ ನಡುವೆಯೂ ಮಹಾತ್ಮಗಾಂಧಿ ವಸ್ತ್ರೋದ್ಯಮ ಯೋಜನೆಯು ನೆನೆಗುದಿಗೆ ಬಿದ್ದಿದೆ. ಕಳೆದೆರಡು ವರ್ಷಗಳಿಂದ ಜನತೆಯ ಪರವಾಗಿ ನಾವುಗಳು ಅದೆಷ್ಟೋ ಬಾರಿ ಅಲೆದಾಡಿದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯಿರುವಂತೆ ಕಾಣಿಸುತ್ತಿದೆ.
ತಾವು ರಾಜಕೀಯ ಇಚ್ಛಾಶಕ್ತಿಯ ಒತ್ತಾಸೆ ನೀಡಿ ಯೋಜನೆಯು ಶೀಘ್ರವಾಗಿ ಹಾಗೂ ಸಮರ್ಪಕವಾಗಿ ಕಾರ್ಯಗತವಾಗುವಂತೆ ಮಾಡುತ್ತೀರಿ ಎಂಬ ನಂಬಿಕೆ ಇದ್ದು, ರಾಜ್ಯದ ಎಲ್ಲಾ ಗ್ರಾಮೀಣ ಕಾರ್ಯಕರ್ತರು ಹಾಗೂ ಗಾಂಧಿವಾದಿಗಳ ಪರವಾಗಿ, ನಾನು ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಎಂದು ಪ್ರಸನ್ನ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Key words: Letter, implementation, Mahatma Gandhi, Textile Industry’ scheme, CM Siddaramaiah,