KPSC ಶುದ್ಧೀಕರಣ ಸರ್ಕಾರದ ತೀರ್ಮಾನ: ಸಂಸ್ಥೆಯನ್ನು ಕನ್ನಡಪರವಾಗಿಸಲಿ- ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರು,ಮಾರ್ಚ್,6,2025 (www.justkannada.in): ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಶೈಲಿಯಲ್ಲಿ ಸರ್ಕಾರವು ಸುಧಾರಣೆ ತರಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ.

ಈ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರಂತರ ಆಗ್ರಹವನ್ನು ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿದ್ದ ಅಂಶವನ್ನು ಸ್ಮರಿಸಿರುವ ಡಾ. ಬಿಳಿಮಲೆ, ಸರ್ಕಾರದ ಈ ಕ್ರಮವು ಅಸಂಖ್ಯ ಕನ್ನಡಿಗ ಅಭ್ಯರ್ಥಿಗಳ ಉದ್ಯೋಗಾಕಾಂಕ್ಷೆಯನ್ನು ಸಾಕಾರವಾಗಿಸುವಲ್ಲಿ ಉತ್ತಮ ನಡೆಯಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಭಾಷಾಂತರ ಇಲಾಖೆ, ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ಪ್ರತಿಭಾನ್ವಿತ ಶಿಕ್ಷಣ ತಜ್ಞರುಗಳು ಕಾರ್ಯನಿರ್ವಹಿಸುತ್ತಿದ್ದು, ಇವರುಗಳ ಸೇವೆಯನ್ನು ಬಳಸಿಕೊಂಡಲ್ಲಿ ಲೋಕಸೇವಾ ಆಯೋಗವು ಉತ್ತಮ ಹೆಸರನ್ನು ಪಡೆಯಬಹುದೆಂದು ತಾವು ಈ ಹಿಂದೆಯೇ ಹೇಳಿದ್ದು, ಈಗ ಸರ್ಕಾರವು ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ನಿರ್ದೇಶನವನ್ನು ನೀಡಲು ಮುಂದಾಗಿರುವುದು ಅಸಂಖ್ಯ ಕನ್ನಡಿಗ ಉದ್ಯೋಗಾರ್ಥಿಗಳಿಗೆ ವಿಶ್ವಾಸ ತುಂಬುವ ಪ್ರಯತ್ನವಾಗಿದೆ ಎಂದು  ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಸ್ವಾಯತ್ತ ಸಂಸ್ಥೆಯ ಹಣೆಪಟ್ಟಿಯೇ ಕನ್ನಡಕ್ಕೆ ವಿರೋಧಿಯಾಗಿರುವುದು ವಿಷಾದನೀಯ. ಸರ್ಕಾರದ ಶುದ್ಧೀಕರಣ ತೀರ್ಮಾನವು ಸಂಸ್ಥೆಯ ವೃತ್ತಿಪರತೆಯನ್ನು ಹೆಚ್ಚಿಸುವಂತಾದರೆ ಅದು ಕನ್ನಡದ ನಿಜವಾದ ಸೇವೆ ಎನ್ನಬಹುದಾಗಿದೆಯೆಂದಿರುವ ಡಾ.ಬಿಳಿಮಲೆ, ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷ ನಡೆಸುವ ಪರೀಕ್ಷೆಗಳಲ್ಲಿ ಒಮ್ಮೆಯೂ ಪ್ರಮಾದ ಉಂಟಾಗದೆ ಇರಲು ಸಾಧ್ಯವಾದರೆ ಕೆಪಿಎಸ್ಸಿಯಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ತೀರ್ಮಾನವು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾಗುವ ಹಾಗಾಗಲಿ ಎಂದು ಅವರು ಆಶಿಸಿದ್ದಾರೆ.

ಆರೋಗ್ಯ ಸಚಿವರ ಕನ್ನಡಪರ ನಿಲುವು ಅಭಿನಂದನೀಯ

ಆರೋಗ್ಯ ಇಲಾಖೆಯ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಲು ವೈಯಕ್ತಿಕ ಗಮನಹರಿಸಿ ರಾಜ್ಯ ಸರ್ಕಾರದ ಎಲ್ಲ ಪತ್ರ ವ್ಯವಹಾರಗಳನ್ನು, ಆದೇಶಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುವುದು ಎಂದು ಪ್ರಾಧಿಕಾರಕ್ಕೆ ವರದಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರ ನಿಲುವನ್ನು ಡಾ. ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ.

ಆರೋಗ್ಯ ಸಚಿವರ ಈ ಕನ್ನಡಪರ ನಿಲುವು ಬೇರೆ ಇಲಾಖೆಗಳಿಗೆ ಮಾದರಿಯಾಗಬೇಕೆಂದು ಆಶಿಸಿರುವ ಡಾ.ಬಿಳಿಮಲೆ ಸರ್ಕಾರದ ಎಲ್ಲ ಇಲಾಖೆಗಳ ಆಡಳಿತದಲ್ಲಿ ಕನ್ನಡದ ಅನುಷ್ಠಾನ ಸಂಪೂರ್ಣವಾದರೆ ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಭರವಸೆ ಮೂಡುವುದು ಸಹಜವೆಂದು ಅವರು ಅಭಿಪ್ರಾಯಿಸಿದ್ದಾರೆ. ಇತ್ತೀಚೆಗೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಂಗ್ಲ ಭಾಷೆಯ ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಕ್ರಮಕ್ಕೆ ಆರೋಗ್ಯ ಸಚಿವರನ್ನು ಆಗ್ರಹಿಸಿದ್ದರು.

Key words: KPSC, Purification, Government, Decision: – Dr. Purushotham bilimale