ಮೈಸೂರು,ಮಾರ್ಚ್,12,2025 (www.justkannada.in): ಪಿಆರ್ ತಿಪ್ಪೇಸ್ವಾಮಿ ಪ್ರತಿಷ್ಟಾನ ವತಿಯಿಂದ ಕೊಡ ಮಾಡುವ ಪಿಆರ್ ಟಿ ಕಲಾ ಪ್ರಶಸ್ತಿಗೆ ಬೆಂಗಳೂರಿನ ಹಿರಿಯ ಚಿತ್ರ ಕಲಾವಿದೆ ಸುಧಾ ಮನೋಹರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖವೀಣೆ ಅಂಜನಪ್ಪ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.
ಇಂದು ಮೈಸೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ರಾಜಶೇಖರ ಕದಂಬ ಅವರು, ಹಿರಿಯ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಅವರ ನೆನಪಿನ ಅಂಗವಾಗಿ ಪ್ರತಿ ವರ್ಷದಂತೆ ಮೈಸೂರಿನಲ್ಲಿ “ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-2025 ಮತ್ತು ಪಿಆರ್ ಟಿ ಕಲಾಪ್ರಶಸ್ತಿ ಪ್ರದಾನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಬಾರಿ ಬೆಂಗಳೂರಿನ ಹಿರಿಯ ಚಿತ್ರ ಕಲಾವಿದೆ ಸುಧಾ ಮನೋಹರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖವೀಣೆ ಅಂಜನಪ್ಪ ಇವರನ್ನು ಪಿಆರ್ಟಿ ಕಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ಚಿತ್ರಕಲೆ ಮತ್ತು ಜಾನಪದ ಕಲೆಗೆ ಪಿಆರ್ ಟಿ ಕಲಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ತಲಾ 25.000/-ನಗದು, ಪ್ರಶಸ್ತಿಪತ್ರ, ಪ್ರಶಸ್ತಿ ಫಲಕ, ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುವುದು.
ಮುಂದಿನ ತಿಂಗಳು ನಡೆಯುವ “ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-2025 ಮತ್ತು ಪಿಆರ್ಟಿ ಕಲಾಪ್ರಶಸ್ತಿ ಪ್ರದಾನ” ಕಾರ್ಯಕ್ರಮದಲ್ಲಿ ಇವರಿಬ್ಬರಿಗೂ ಪಿಆರ್ಟಿ ಕಲಾಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹಾಗೆಯೇ ಸುಧಾ ಮನೋಹರ್ ರವರು ಮೂಲತಃ ಧಾರಾವಾಡದವರು. ಬೆಂಗಳೂರಿನ ಪ್ರತಿಷ್ಠಿತ ಕಲಾ ಕಾಲೇಜು ಚಿತ್ರಕಲಾ ಪರಿಷತ್ ನಲ್ಲಿ ಹಾಗೂ ಸ್ವಿಜರ್ಲ್ಯಾಂಡ್ ನಲ್ಲಿ ಕಲಾಶಿಕ್ಷಣ ಮುಗಿಸಿ, ನಂತರ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕದ ಕಲಾವಲಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದು ಜೀವಮಾನದ ಕಲಾಶಿಕ್ಷಕಿ ಪ್ರಶಸ್ತಿ, ಮೈಸೂರು ದಸರಾ ಕಲಾ ಪ್ರಶಸ್ತಿ, ಆಲ್ ಇಂಡಿಯಾ ಆರ್ಟಿಸ್ಟ್ ಎಕ್ಸಿಬಿಷನ್ನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ಕಲಾಕೃತಿಗಳು ಸಂಗ್ರಹಗೊಂಡಿವೆ ಎಂದು ರಾಜಶೇಖರ ಕದಂಬ ತಿಳಿಸಿದರು.
ಇನ್ನು ಮುಖವೀಣೆ ಅಂಜನಪ್ಪನವರು ಚಿಕ್ಕಬಳ್ಳಪುರದ ದಪ್ಪರ್ತಿ ಗ್ರಾಮದವರು. ಜನಪದ ಕಲಾಪ್ರಕಾರದ ಮುಖವೀಣೆ ವಾದನವನ್ನು ಶಾಸ್ತ್ರೀಯವಾಗಿ ನುಡಿಸುವ ಮೂಲಕ ಜಾನಪದ ಹಿನ್ನಲೆಯ ವಾದ್ಯಕ್ಕೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟವರು. ರಂಗಗೀತೆ, ಬಯಲಾಟ, ಚಲನಚಿತ್ರ ಗೀತೆಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದು, ಏಕಕಾಲದಲ್ಲಿ ಐದು ವಾದನಗಳನ್ನು ನುಡಿಸಿ ನೋಡಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಜಾನಪದ ಅಕಾಡಮಿಯ ಕಲಾಪ್ರಶಸ್ತಿ, ಜನಪದ ಶ್ರೀ ಕಲಾಪ್ರಶಸ್ತಿ, ಲಭಿಸಿದೆ. ನೂರಾರು ಸಂಘ ಸಂಸ್ಥೆಗಳು ಆಹ್ವಾನಿಸಿ ಗೌರವಿಸಿವೆ. ಈ ಇಳಿ ವಯಸ್ಸಿನಲ್ಲಿಯು ಕಲೆಯನ್ನು ನಿರಂತರವಾಗಿ ಮೈಗೂಡಿಸಿಕೊಂಡಿದ್ದಾರೆ ಎಂದು ರಾಜಶೇಖರ ಕದಂಬ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್ ಕಾರ್ಯದರ್ಶಿ ಕೆ.ಸಿ ಮಹದೇವಶೆಟ್ಟಿ ಹಾಗೂ ನಿರ್ದೇಶಕ ಹೆಚ್ ಆರ್ ಚಂದ್ರಶೇಖರಯ್ಯ ಹಾಗೂ ಮೈಲಹಳ್ಳಿ ರೇವಣ್ಣಉಪಸ್ಥಿತರಿದ್ದರು.
Key words: Veteran artist, Sudha Manohar, PRT Art Award