ಪಿ.ಯು. ಉಪನ್ಯಾಸಕರ ಸಂಘದ ಅಧ್ಯಕ್ಷರಿಂದ ನಕಲಿ ದಾಖಲೆ ಸಲ್ಲಿಕೆ ಆರೋಪ.?

ಮೈಸೂರು, ಮಾ.18, 2025:  ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ನಿಕಟಪೂರ್ವ ಅಧ್ಯಕ್ಷ ನಿಂಗೇಗೌಡ ಎ.ಎಚ್. ಅವರು ನಕಲಿ ದಾಖಲೆಗಳನ್ನು ಸೃಷ್ಠಿಸಿ, ಸಹಕಾರ ಸಂಘಗಳ ಉಪನಿಬಂಧಕರಿಗೆ ಸಲ್ಲಿಸುವ ಮೂಲಕ ಉಪನ್ಯಾಸಕರ ಸಂಘದ ಕಾರ್ಯಕಾರಿ ಸಮಿತಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದೇ ಅವಧಿಯಲ್ಲಿ ನಡೆದಿರುವ ನಿಯಮ ಬಾಹಿರವಾಗಿ ಬೈಲಾ ತಿದ್ದುಪಡಿಗೆ ಸಹಕಾರ ಸಂಘಗಳ ಉಪನಿಬಂಧಕರಿಂದ  ಇಲಾಖೆಯ ಅನುಮೋದನೆ ಪಡೆಯುವ ಪ್ರಯತ್ನ  ನಡೆಸಿದ್ದಾರೆಂದು ಆರೋಪಿಸಿ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಉಪನ್ಯಾಸಕರು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು/ಉಪನಿಬಂಧಕರಿಗೆ ದೂರು ಸಲ್ಲಿಸಿದ್ದಾರೆ.

ಆರೋಪವೇನು?:

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯ ಆಯ್ಕೆಗಾಗಿ 2019ರ ಫೆಬ್ರವರಿಯಲ್ಲಿ ಚುನಾವಣೆಗಳು ನಡೆದಿದ್ದವು. ಚುನಾಯಿತ ಕಾರ್ಯಕಾರಿ ಸಮಿತಿಯ ಅವಧಿ 5 ವರ್ಷಗಳು (2019-2024). ತಿಮ್ಮಯ್ಯಪುರ್ಲೆ ಅವರ ನೇತೃತ್ವದ ರಾಜ್ಯ ಕಾರ್ಯಕಾರಿ ಸಮಿತಿಯ 9 ಜನ ಸದಸ್ಯ ಉಪನ್ಯಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆಯ್ಕೆಗೊಂಡ ಎಲ್ಲಾ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು 24 ಫೆಬ್ರವರಿ 2019ರಂದು ಶಾಸಕರ ಭವನದಲ್ಲಿ ಪುರ್ಲೆಯವರ ನೇತೃತ್ವದಲ್ಲಿ ನಡೆಸಲಾಯಿತು. ಅದರ ವರದಿಗಳು ಮರುದಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ತಿಮ್ಮಯ್ಯಪುರ್ಲೆಯವರು 2020ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಸ್ವಯಂ ನಿವೃತ್ತಿ ಹೊಂದಿದ ನಂತರ, ತೆರವಾದ ಉಪನ್ಯಾಸಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಂಗೇಗೌಡ ಎ.ಎಚ್. ಅವರನ್ನು ಅಧ್ಯಕ್ಷ ಸ್ಥಾನಕ್ಕೂ,  ಖಾಲಿಯಾದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕಲ್ಬುರ್ಗಿ ಜಿಲ್ಲೆಯ ಶಿವರಾವ್ ಬಿ. ಮಾಲಿಪಾಟೀಲರನ್ನೂ ಕೋಅಪ್ಟ್ ಮಾಡಿಕೊಳ್ಳಲಾಗಿತ್ತು. ನಿಯಮಗಳ ಪ್ರಕಾರ ಚುನಾವಣೆ ನಡೆದಂದಿನಿಂದ 5 ವರ್ಷಗಳ ಅವಧಿಗೆ ಅಂದರೆ 2024ರ ಫೆಬ್ರವರಿ ವರೆಗೆ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರ ಅವಧಿಯು ಮುಕ್ತಾಯವಾಗುತ್ತದೆ. ಆದರೆ ನಿಂಗೇಗೌಡರು ಅವಧಿ ಮುಗಿದ ನಂತರದಲ್ಲಿ 2024ರ ಸೆಪ್ಟೆಂಬರ್ ನಲ್ಲಿ ಆನ್ ಲೈನ್ ನಲ್ಲಿ ಸಂಘದ ಸದಸ್ಯರಾಗಲು ಆಪ್ ಬಿಡುಗಡೆ ಮಾಡಿದರು. ಆಪ್ ಎಲ್ಲಾ ಉಪನ್ಯಾಸಕರಿಗೂ ಸಮರ್ಪಕವಾಗಿ ತಲುಪದ ಕಾರಣ ಅನೇಕ ಅರ್ಹ ಉಪನ್ಯಾಸಕರು ಸಂಘದ ಸದಸ್ಯರಾಗುವಲ್ಲಿ ವಿಫಲರಾದರು. ಇದರ ನಡುವೆ ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ಕ್ಕೆ ವಿರುದ್ಧವಾಗಿ ಬೈಲಾ ತಿದ್ದುಪಡಿ ಮಾಡಿ, ನಿಯಮ ಪ್ರಕಾರ 21 ದಿನಗಳ ಮುಂಚಿತವಾಗಿ ಯಾವುದೇ ಪೂರ್ವ ಸೂಚನಾ ಪತ್ರಗಳನ್ನು ಮತ್ತು ಉದ್ದೇಶಿತ ಉಪನಿಯಮಗಳ ತಿದ್ದುಪಡಿ ಪ್ರತಿಗಳನ್ನು ಸಂಘದ ಸದಸ್ಯರಿಗೆ  ಕಳುಹಿಸದೆ ನವೆಂಬರ್ ತಿಂಗಳಲ್ಲಿ ರಾಯಚೂರಿನಲ್ಲಿ ಸರ್ವ ಸದಸ್ಯರ ಸಭೆ ಕರೆದರು. ಅಲ್ಲಿ ಯಾವುದೇ ಗಂಭೀರ ವಿಷಯಗಳ ತಿದ್ದುಪಡಿಯನ್ನು ಸದಸ್ಯರ ಚರ್ಚೆಗೆ ಬಿಡದೆ ಏಕಪಕ್ಷಿಯವಾಗಿ ಒಪ್ಪಿಗೆ ಇದೆ ಎಂದು ಘೋಷಿಸಿಕೊಂಡು ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರ ಅನುಮೋದನೆಗೆ ಸಲ್ಲಿಸಿದ್ದರು.  ಕಾರ್ಯಕಾರಿ ಸಮಿತಿಯ ಅವಧಿ ಮುಗಿದ ನಂತರ ಬೈಲ ತಿದ್ದುಪಡಿ ಮಾಡಿರುವುದು ನಿಯಮ ಬಾಹಿರವೆಂದು ಆರೋಪಿಸಿ, ವಿವಿಧ ಜಿಲ್ಲೆಗಳ ನೂರಾರು ಸದಸ್ಯರು ಸಹಕಾರ ಸಂಘದ ಜಿಲ್ಲಾ ಉಪನಿಬಂಧಕರಿಗೆ ದೂರು ನೀಡಿರುತ್ತಾರೆ. ಉಪನ್ಯಾಸಕರ ಆರೋಪದಲ್ಲಿ ಉರುಳಿಲ್ಲವೆಂದು ಹೇಳಿಕೆ ಕೊಟ್ಟಿರುವ ನಿಂಗೇಗೌಡರು ತಮ್ಮ ಚುನಾವಣೆ ನಡೆದಿರುವುದೇ 2020ರ ಫೆಬ್ರವರಿಯಲ್ಲಿ ಆದ್ದರಿಂದ ನಮ್ಮ ಅವಧಿ 2025ರ ಫೆಬ್ರವರಿವರೆಗೂ ಇರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಹಕಾರ ಸಂಘದ ಜಿಲ್ಲಾ ಉಪನಿಬಂಧಕರಿಗೆ  ಸಲ್ಲಿಸಿರುತ್ತಾರೆ. ಸಲ್ಲಿಸಿರುವ ದಾಖಲೆಗಳೆಲ್ಲವೂ ನಿಂಗೇಗೌಡರು ಸೃಷ್ಠಿಸಿರುವ ನಕಲಿ ದಾಖಲೆಗಳಾಗಿದ್ದು, ಚುನಾವಣಾ ಅಧಿಕಾರಿಯ ಸಹಿ ಸೇರಿದಂತೆ ಹಲವರ ಸಹಿಗಳನ್ನೂ ಪೋರ್ಜರಿ ಮಾಡಿದ್ದಾರೆ. ಸಲ್ಲಿಸಿರುವ ಪ್ರಮಾಣ ಪತ್ರಗಳಲ್ಲಿನ ಬರವಣಿಗೆಗಳು ಚುನಾವಣಾ ಅಧಿಕಾರಿಯಾಗಿದ್ದ ಬಸವಲಿಂಗಪ್ಪ ಎಸ್. ಬಿರಾದಾರ ಅವರದಾಗಿರದೆ, ಅದೂ ಕೂಡ ನಿಂಗೇಗೌಡರದೇ ಆಗಿದೆ. ಇದೊಂದು ಗಂಭೀರ ಕ್ರಿಮಿನಲ್  ಪ್ರಕರಣವಾಗಿದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ದೂರುದಾರರಾದ ಮಂಜೇಗೌಡ, ಶಶಿಧರ್, ಕೃಷ್ಣೇಗೌಡ, ಮಂಜುನಾಥ್ ಮೊದಲಾದವರು ಸಹಕಾರ ಸಂಘಗಳ ಉಪನಿಬಂಧಕರನ್ನು ಒತ್ತಾಯಿಸಿದ್ದಾರೆ.

ಉದ್ದೇಶವೇನು?:

ಉಪನ್ಯಾಸಕರ ಸಂಘದ ಹಳೆಯ ಬೈಲ ಪ್ರಕಾರ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಅಂದರೆ 3 ಹಂತದ ಚುನಾವಣೆ ಆಗಿತ್ತು. ಆದರೆ ಸ್ವಹಿತಾಸಕ್ತಿಯ ಕಾರಣಕ್ಕಾಗಿ ಜಿಲ್ಲೆ ಮತ್ತು ರಾಜ್ಯಕ್ಕೆ ಮಾತ್ರ ಚುನಾವಣೆ ನಡೆಸುವ 2 ಹಂತವಾಗಿ ಬೈಲ ತಿದ್ದುಪಡಿ ಮೂಲಕ ಬದಲಿಸಿದ್ದಾರೆ. ಇದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದರೂ ನಿಯಮ ಬಾಹಿರವಾಗಿ ಬೈಲ ತಿದ್ದುಪಡಿ ನಡೆಸಿ ಸಹಕಾರ ಸಂಘದ  ಜಿಲ್ಲಾ ಉಪನಿಬಂಧಕರ ಕಛೇರಿಗೆ ಅನುಮೋದನೆಗಾಗಿ ಸಲ್ಲಿಸಿದ್ದಾರೆ.

ಉಪನ್ಯಾಸಕರ ಸಂಘದ ಚುನಾವಣೆಯು 2019ರ ಫೆಬ್ರವರಿಯಲ್ಲಿ ನಡೆದಿರುವುದು ಇಡೀ ರಾಜ್ಯದ ಉಪನ್ಯಾಸಕ ಸಮುದಾಯಕ್ಕೇ ಗೊತ್ತಿದೆ. ಇದಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು, ಪತ್ರಿಕಾ ವರದಿಗಳನ್ನೂ, ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಚುನಾಯಿತ ಸದಸ್ಯರಿಗೆ ಚುನಾವಣಾ ಅಧಿಕಾರಿಗಳು ವಿತರಿಸಿರುವ ಪ್ರಮಾಣಪತ್ರಗಳನ್ನೂ ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿಗೆ  ಸಲ್ಲಿಸಿರುವುದಾಗಿ ದೂರುದಾರರಾದ ಹೆಸರಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜುನಾಥ್  ಎಸ್. ಅವರು ತಿಳಿಸಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಂಘವನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿರುವ ನಿಂಗೇಗೌಡರ ವಿರುದ್ಧ ತನಿಖೆಯಾಗಬೇಕು. ಅವರ ಸಂಘದ ಸದಸ್ಯತ್ವವನ್ನು ರದ್ದುಪಡಿಸಬೇಕು.        – ಶಶಿಧರ್ ಅರಕಲಗೂಡು, ದೂರದಾರ

ಕಾರ್ಯಕಾರಿ ಸಮಿತಿಯ ಅವಧಿ ಮುಗಿದಿರುವ ಕಾರಣ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಬೇಕು. ಅದಕ್ಕೂ ಮೊದಲು ಉಳಿದೆಲ್ಲ ಉಪನ್ಯಾಸಕರು ಸಂಘದ ಸದಸ್ಯರಾಗಲು ಮುಕ್ತ ಅವಕಾಶವನ್ನು ಕಲ್ಪಿಸಬೇಕು.

– ಮಂಜೇಗೌಡ ಮೈಸೂರು,   ದೂರುದಾರ.

ಶ್ರೀಕಂಠಯ್ಯ. ಸೂರ್ಯ ಕುಮಾರ್.  ಮಂಡ್ಯ ಕೃಷ್ಣೆಗೌಡ

key words: PU Lecturers’ Association, President, fake documents

summary:

PU Lecturers’ Association President accused of submitting fake documents