ಸ್ಪರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸವೇ ಮುಖ್ಯ: ನಕಾರಾತ್ಮಕ ಚಿಂತನೆ ಬಿಡಿ- ಕೆ.ಆರ್ ನಂದಿನಿ

ಮೈಸೂರು,ಏಪ್ರಿಲ್,21,2025 (www.justkannada.in): ನಕಾರಾತ್ಮಕ ಚಿಂತನೆ ಬಿಡಿ. ಗುರಿಗೆ ಸಮಯ ನಿಗದಿಪಡಿಸಿಕೊಳ್ಳಿ. ಸ್ಪರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸವೇ ಮುಖ್ಯ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಅಭಿಪ್ರಾಯಿಸಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಐಎಎಸ್ ಹಾಗೂ ಕೆಎಎಸ್ ಪರೀಕ್ಷಾ ತರಬೇತಿಯ ಶಿಬಿರಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಸಂವಾದ ನಡೆಸಿ ಮಾತನಾಡಿದರು.

ಸ್ಮರ್ಧಾತ್ಮಕ ಪರೀಕ್ಷೆ ಕುರಿತು ಗೊಂದಲ ನಿವಾರಿಸಿದ ಅವರು, ಸಿದ್ದತೆ ಹೇಗಿದ್ದರೆ ಉತ್ತಮ, ಓದುವುದು ಹೇಗೆ, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ, ಪ್ರಶ್ನೆಗೆ ಉತ್ತರಿಸುವ ಕ್ರಮ, ಎಷ್ಟು ಅಂಕದ ಪ್ರಶ್ನೆಗಳಿಗೆ ಓದಲು ಆದ್ಯತೆ ನೀಡಬೇಕು, ವಿಷಯವಾರು ಅಧ್ಯಯನ ಮಾಡುವ ವಿಧಾನ, ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಅವರು ಅನುಸರಿಸಿದ ತಂತ್ರ, ಪ್ರತಿನಿತ್ಯ ಎಷ್ಟು ವಿಷಯ ಓದಬಹುದು, ಕಂಠಪಾಠ ಅಥವಾ ಅರ್ಥ ಮಾಡಿಕೊಂಡು ಓದುವುದರಲ್ಲಿ ಯಾವ ವಿಧಾನ ಉತ್ತಮ, ಮನನ ಕ್ರಮ ಹೇಗೆ, ಓದಿದ್ದನ್ನು ಬರೆದು ಅಭ್ಯಾಸ ಮಾಡಿದರೆ ನೆನಪಿನಲ್ಲಿ ಉಳಿಯುತ್ತಾ….. ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಗುರಿಗೆ ನಿರ್ಣಯ ಮಾಡುವುದು ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಮಾಡಬೇಕು. ಪರೀಕ್ಷೆ ಎದುರಿಸುವುದಕ್ಕೆ ಧೈರ್ಯ ಮಾಡಿ ಆದರೆ ಪರೀಕ್ಷೆಯೇ ಅಂತಿಮ ಅಲ್ಲ. ಎರಡು ವರ್ಷ ಓದಿ ಪರೀಕ್ಷೆ ಸಫಲವಾಗಲಿಲ್ಲ ಅಂದರೆ ದೃತಿಗೇಡಬೇಡಿ, ಮುಂದಿನ ದಾರಿ ಹುಡುಕಿ ಎಂದು ಸಲಹೆ ನೀಡಿದರು.

ಯುಪಿಎಸ್‌ಸಿ ಜರ್ನಿ ಯುನಿಕ್ ಆಗಿದೆ. ಬೇರೆಯವರೊಂದಿಗೆ ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಪರೀಕ್ಷೆ ಬರೆಯುವವರು ಪ್ರಸ್ತುತ ವಿದ್ಯಾಮಾನದ ಬಗ್ಗೆ ಗಮನ ಹರಿಸಿ. ನೀವು ಪ್ರಸ್ತುತ ಓದುತ್ತಿರುವ ವಿಷಯದ ಕುರಿತು ಸಂಪೂರ್ಣ ತಿಳಿದುಕೊಳ್ಳಿ. ಬೆಸಿಕಲಿ ಎನ್ ಸಿ ಇ ಆರ್ ಟಿ ಪುಸ್ತಕ ಸಹಾಯ ಮಾಡುತ್ತೆ. ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಎಂಬ ಮಾಧ್ಯಮ ಅಸಹಾಯಕತೆ ಬೇಡ, ಕನ್ನಡದಲ್ಲಿ ನೀವು ಉತ್ತಮವೇ, ಕನ್ನಡದಲ್ಲೇ ಪರೀಕ್ಷೆ ಎದುರಿಸಿ. ನಾನು ಸಹ ಯುಪಿಎಸ್‌ ಸಿಯಲ್ಲಿ ಐಚ್ಛಿಕ ವಿಷಯ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೆ ಎಂದು ಉದಾಹರಿಸುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಹುರಿದುಂಬಿಸಿದರು.

ಪರೀಕ್ಷಾ ತಯಾರಿ ಬಗ್ಗೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅವರು ಮಾತನಾಡಿ, ಓದಿಗೆ ಆಸಕ್ತಿ ಮುಖ್ಯ. ಇಲ್ಲಿ ಬಹಳ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಇದ್ದಾರೆ. ಮಾಧ್ಯಮ ಮುಖ್ಯ ಅಲ್ಲ. ಓದುವ ಆಸಕ್ತಿ ಮುಖ್ಯ. ಹೀಗಾಗಿ ನನಗೆ ಇಂಗ್ಲಿಷ್ ಬರಲ್ಲ, ಹಿಂದಿ ಬರಲ್ಲ ಎನ್ನುವ ಹಿಂಜರಿಕೆ ಬೇಡ. ನಿಮಗೆ ದೃಢವಿರುವ ಮಾಧ್ಯಮದಲ್ಲೇ ಓದಿ ಪರೀಕ್ಷೆ ಎದುರಿಸಿ ಎಂದರು.

ಓದುವ ಅನಿವಾರ್ಯ ಸೃಷ್ಟಿಸಿಕೊಳ್ಳಿ. ಎರಡು ವರ್ಷ ಓದಿಗೆ ಅಂತಾನೆ ಮೀಸಲಿಡಿ. ಒಳ್ಳೆ ಒಳ್ಳೆ ಪುಸ್ತಕ ತೆಗೆದುಕೊಳ್ಳಿ. ನಿಮ್ಮ ಸ್ನೇಹಿತರ ಜೊತೆ ವಿಷಯವಾರು ಚರ್ಚೆ ಮಾಡಿ. ಒಟ್ಟಾರೆ ಪರೀಕ್ಷೆ ಎದುರಿಸುವ ಛಲ ಬೆಳೆಸಿಕೊಳ್ಳಿ ಎಂದು ಹೇಳಿದರು.

ಶ್ರದ್ಧೆ ಹಾಗೂ ಸತತ ನಿರಂತರ ಪ್ರಯತ್ನದಿಂದ ತಮ್ಮ ಗುರಿ ಮುಟ್ಟುವ ತನಕ ಅಭ್ಯಾಸ ಮಾಡಿ. ಸಮಸ್ಯೆಗೆ ಹೆದರಿ ಅಭ್ಯಾಸ ನಿಲ್ಲಿಸಬೇಡಿ. ಜೊತೆಗೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಿ ನಿಮ್ಮ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಎಲ್ಲಾ ಪರೀಕ್ಷೆಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ ಎಂದರು.

ಪರೀಕ್ಷೆ ಎದುರಿಸಲು ನಿಮ್ಮ ವೈಯಕ್ತಿಕ ಆಸಕ್ತಿ ಮುಖ್ಯವಾಗಿರಬೇಕೆ ಹೊರತು ಬೇರೆಯವರ ಒತ್ತಾಯಕ್ಕೆ ಓದಬಾರದು. ನಿಮ್ಮ ಗುರಿ ಅಚಲವಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಲಪತಿ ಪ್ರೊ.ವಿ.ಶರಣಪ್ಪ ಹಲಸೆ ಅವರು 2017ನೇ ಸಾಲಿನಲ್ಲಿ ದೇಶಕ್ಕೆ ಪ್ರಥಮ. ರ್ಯಾಂಕ್ ಪಡೆದು ಆಯ್ಕೆಯಾದ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ಅವರನ್ನು ಕರಾಮುವಿ ಪರವಾಗಿ ಅಭಿನಂದಿಸಿ ಮಾತನಾಡಿ,  ನಮ್ಮ ರಾಜ್ಯಕ್ಕೆ ಹೆಮ್ಮೆ ತಂದ ನಂದಿನಿ ಅವರು ಶಿಕ್ಷಕರ ಮಗಳಾಗಿ ಇಡೀ ಶಿಕ್ಷಕ ವೃಂದಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸ್ಫೂರ್ತಿಯಾಗಿದ್ದಾರೆ. ಅದಕ್ಕಾಗಿ ನಾನು ನನ್ನ ವಿಶ್ವವಿದ್ಯಾನಿಲಯದ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ವಿಶ್ವನಾಥ್, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಟು, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್ ರಾಜ್, ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿ ಸಿದ್ದೇಶ್ ಹೊನ್ನೂರು. ಬಿ. ಗಣೇಶ್ ಕೆ.ಜಿ. ಕೊಪ್ಪಲ್ ಇದ್ದರು.

Key words: Mysore, KSOU, Confidence, competitive world, CEO, KR Nandini