ನೂರು ಸೈಟ್ ಹೊಂದಿದ್ದಾರೆಂದು ಇಲ್ಲಸಲ್ಲದ ಆರೋಪ: ಲೀಗಲ್ ನೋಟಿಸ್ ಕಳುಹಿಸುತ್ತೇನೆ- ಶಾಸಕ ಜಿ.ಟಿ ದೇವೇಗೌಡ ಎಚ್ಚರಿಕೆ

ಮೈಸೂರು,ಜುಲೈ,11,2024 (www.justkannada.in) ನೂರು ಸೈಟ್ ಹೊಂದಿದ್ದಾರೆಂದು ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಹೀಗೆ ಆರೋಪ ಮುಂದುವರೆದರೆ ಲೀಗಲ್ ನೋಟಿಸ್ ಕಳುಹಿಸುತ್ತೇನೆ ಎಂದು ಜೆಡಿಎಸ್ ಶಾಸಕ  ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ನಾವು ನಮ್ಮ ಪಕ್ಷದ ಅಧ್ಯಕ್ಷರಾದ ಸಿಸಿ ಪಾಟೀಲ್ ಜೊತೆ ರಾಜ್ಯ ಪರ್ಯಟನೆ ಮಾಡಿದ್ವಿ. ಈ ವೇಳೆ ಅನೇಕರು ನನ್ನ ಪ್ರಶ್ನೆ ಮಾಡಿದರು. ಏನ್ ಗೌಡ್ರೆ ನಿಮ್ಮದು ನೂರಕ್ಕೂ ಹೆಚ್ಚು ನಿವೇಶನ ಇದೆಯಂತೆ ಎಂದು. ನಾನು ಹುಟ್ಟಿದಾಗಿನಿಂದಲೂ, ಶಾಲಾ ಶಿಕ್ಷಣದಿಂದಲೂ ರೈತ. ನಮ್ಮ ಕುಟುಂಬದ ಸ್ವಾಭಿಮಾನ, ಮರ್ಯಾದೆ ಎಲ್ಲವನ್ನು ಉಳಿಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕಾರಣದ ಅವಧಿಯಲ್ಲಿ ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ಹೆಸರಿನಲ್ಲಿ ಯಾವುದಾದರು ಹೋಟೆಲ್, ಪೆಟ್ರೋಲ್ ಬಂಕ್ ಇದ್ದರೆ ಖಂಡಿತ ನನ್ನ ಆಸ್ತಿಯನ್ನ ಬರೆದುಕೊಡುತ್ತೇನೆ. ನನ್ನ ರೀತಿ ರಾಜಕಾರಣ ಮಾಡಿಕೊಂಡು ಬಂದಿರುವ ವ್ಯಕ್ತಿ ಮತ್ತೊಬ್ಬರಿಲ್ಲ. ಹೀಗಿದ್ದರೂ ನನ್ನ ಮೇಲೆ ನೂರು ನಿವೇಶನ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಎರಚಲಗೂಡು ರೈತರು ಈಗಲೂ ಬದುಕಿದ್ದಾರೆ. ಯಾರಾದ್ರೂ ಒಬ್ಬ ರೈತ ನನಗೆ ದುಡ್ಡು ಕೊಟ್ಟಿದ್ದಾರೆ ಎಂದು ಬೇಕಿದ್ದರೆ ಸಾಬೀತು ಪಡಿಸಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಸಂಸ್ಥೆ ಉಳಿಯಬೇಕೆಂದು ದುಡಿದಿರುವವನು ನಾನು ಎಂದರು.

ನನ್ನ ವಿರುದ್ಧ ಸುಖಾ ಸುಮ್ಮನೆ ಕೆಲವರು ಆರೋಪ ಮಾಡಿದ್ದಾರೆ. ಜಿಟಿ ದೇವೇಗೌಡರು ನೂರು ನಿವೇಶನ ಹೊಂದಿದ್ದಾರೆ ಎನ್ನುತ್ತಿದ್ದಾರೆ. ಮಾಧ್ಯಮಗಳಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆಧಾರ ರಹಿತ ಆರೋಪ ಯಾರೇ ಮಾಡಿರಲಿ. ನನ್ನ ವಿರುದ್ಧ ಇದೆ ರೀತಿ ಆರೋಪ ಮುಂದುವರೆದರೆ ಅಂತಹ ವ್ಯಕ್ತಿಗಳಿಗೆ ಲೀಗಲ್ ನೋಟಿಸ್ ಕಳುಹಿಸುತ್ತೇನೆ. ನನ್ನ ತೇಜೋವದೆಗೆ ಮುಂದಾಗುವವರನ್ನ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತೇನೆ ಎಂದು ಜಿ.ಟಿ ದೇವೇಗೌಡ ತಿಳಿಸಿದರು.

ಬಿಜೆಪಿ  ಪ್ರತಿಭಟನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.

ಮುಡಾ ಹಗರಣ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ,  ಪ್ರತಿಭಟನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಮ್ಮನ್ನ ಪ್ರತಿಭಟನೆಗೆ ಕರೆದಿಲ್ಲ. ಜುಲೈ 15ರಿಂದ ಅಧಿವೇಶನ ಪ್ರಾರಂಭ ಆಗುತ್ತದೆ. ಅಲ್ಲಿ ನಮ್ಮ ಹೋರಾಟ ಮಂದುವರೆಯುತ್ತದೆ. ನಮ್ಮ ಹೋರಾಟ ಹೇಗಿರುತ್ತೆ ಎಂಬುದನ್ನ ಕಾದು ನೋಡಿ. ನಾನಾಗಲಿ, ಮಂಜೇಗೌಡರಾಗಲಿ, ಸಿಎಂ ಆಗಲಿ ಯಾರು ತಪ್ಪು ಮಾಡಿದ್ದರೂ ತಪ್ಪೇ. ಮುಡಾ ಹಗರಣ ವಿರುದ್ಧ ನಮ್ಮ ಹೋರಾಟ ಇದ್ದೆ ಇರುತ್ತೆ. ಕಾಂಗ್ರೆಸ್ ಸರ್ಕಾರ ಬಂದಾಗಲೇ ಮುಡಾದಲ್ಲಿ ಅತಿ ಹೆಚ್ಚಿನ ಭ್ರಷ್ಟಾಚಾರ ಆಗಿರೋದು ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದ ಹಗರಣ ವಿಚಾರ, ಸಿಎಂ ಗಮನಕ್ಕೆ ಬರದೇ ಹಣ ವರ್ಗಾವಣೆ ಹೇಗೆ ಆಯ್ತು. ಇದು ಅವರದೇ ಇಲಾಖೆಗೆ ಸಂಬಂಧ ಪಟ್ಟ ವಿಚಾರ. ಚಿಕ್ಕ ಚಿಕ್ಕ ಕಾರಣಕ್ಕೆ ಹಿಂದೆ ರಾಮಕೃಷ್ಣ ಹೆಗೆಡೆ, ಬಂಗರಾಪ್ಪ ಎಲ್ಲಾ ರಾಜೀನಾಮೆ ಕೊಟ್ಟಿದ್ದರು. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ಈಗ ರಾಜೀನಾಮೆ ನೀಡಲಿ. ಸಮಾಜವಾದಿ ಹಿನ್ನೆಲೆಯಲ್ಲಿ ಬಂದ ಸಿದ್ದರಾಮಯ್ಯ ಈ ಕಳಂಕದಿಂದ ಹೊರಬಂದು ಮತ್ತೆ ಬೇಕಾದರೇ ಸಿಎಂ ಆಗಲಿ ಎಂದು ಒತ್ತಾಯಿಸಿದರು.

ನಾವೆಲ್ಲಾ ಮುಡಾ ಸದಸ್ಯರು ಸತ್ಯ. ಪ್ರತಿಯೊಂದು ಮೀಟಿಂಗ್ ನಲ್ಲಿ ಬರುವ ಫೈಲ್ ಗಳನ್ನ ನಾವು ಪರಿಶೀಲನೆ ಮಾಡಲು ಸಾಧ್ಯನಾ…? ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಫೈಲ್ ಗಳು ಮೀಟಿಂಗ್ ಗೆ ಬರುತ್ತೆ. ಅಲ್ಲಿ ನಾವು ಎಲ್ಲಾ ಸರಿ ಇದ್ಯಾ ಎಂದು ಕೇಳಿ ಒಪ್ಪಿಗೆ ಕೊಡುತ್ತೇವೆ‌ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.

Key words: accusation, 100 sites, legal notice, MLA, GT Deve Gowda