BENGALURU INTERNATIONAL SECOND AIRPORT:  ಸಚಿವ  ಎಂ ಬಿ ಪಾಟೀಲ್‌ ಹೇಳಿದ್ದೇನು..?

A high-level team of the Airports Authority of India (AAI), which has inspected all the three locations for the proposed second airport near the capital, is likely to give its views in a month.

ಬೆಂಗಳೂರು, ಏ.೧೦,೨೦೨೫ : ರಾಜಧಾನಿಯ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಏರ್ಪೋರ್ಟ್ ಸಂಬಂಧ ಮೂರೂ ಸ್ಥಳಗಳ ಪರಿಶೀಲನೆ ನಡೆಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಇನ್ನು ಒಂದು ತಿಂಗಳಲ್ಲಿ ತನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆ ಇದೆ. ಬಳಿಕ ಇದನ್ನು ವಿಸ್ತೃತ ಅಧ್ಯಯನಕ್ಕೆ ವಿಮಾನ‌ ನಿಲ್ದಾಣಗಳ ಅಭಿವೃದ್ಧಿಪಡಿಸುವಂತಹ ಪರಿಣತ ಕಂಪನಿಗಳ ಮುಂದೆ ಕೊಂಡೊಯ್ಯಲಾಗುವುದು.   ಬಳಿಕ ಸರಕಾರವು ವಿಮಾನ‌ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಗುರುವಾರ ಹೇಳಿದ್ದಾರೆ.

ಎಎಐ ತಂಡ ಬಂದು ಹೋಗಿರುವುದು ನಿಜ. ವಿಮಾನ‌ ನಿಲ್ದಾಣವನ್ನು ಎಲ್ಲಿ ಮಾಡಿದರೆ ಸೂಕ್ತವೆನ್ನುವುದು ಪ್ರಯಾಣಿಕರ ದಟ್ಟಣೆ, ಕಾರ್ಗೋ ದಟ್ಟಣೆ ಮತ್ತು ಕೈಗಾರಿಕಾ ಅಗತ್ಯ ಮುಂತಾದ ಅಂಶಗಳನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದ್ದಾರೆ.

ಈಗ ದೇವನಹಳ್ಳಿ ಬಳಿ ವಿಮಾನ‌ ನಿಲ್ದಾಣವಿದೆ. 2033ರವರೆಗೂ ಇಲ್ಲಿಂದ 150 ಕಿ.ಮೀ. ಅಂತರದಲ್ಲಿ ಇನ್ನೊಂದು ಏರ್ಪೋರ್ಟ್ ಮಾಡಬಾರದು ಎನ್ನುವ ಷರತ್ತಿದೆ. ನಾವು ಈಗಿನಿಂದಲೇ ಪ್ರಾರಂಭಿಸಿದರೆ, 2030ರ ವೇಳೆಗೆ ಎರಡನೇ ಏರ್ಪೋರ್ಟ್ ಅಭಿವೃದ್ಧಿ ಪ್ರಾರಂಭಿಸಬಹುದು. ಇಲ್ಲದೆ ಹೋದರೆ 2040ನೇ ಇಸವಿ ಬಂದರೂ ವಿಮಾನ‌ ನಿಲ್ದಾಣ ಆಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ಹಿರಿಯ ನಾಯಕ ಟಿ ಬಿ ಜಯಚಂದ್ರ ಅವರು ತಮ್ಮ ಕ್ಷೇತ್ರವಾದ ಶಿರಾ ಸಮೀಪ ಏರ್ಪೋರ್ಟ್ ಬರಲೆಂದು ಪ್ರಯತ್ನ ಶುರು ಮಾಡಿದ್ದಾರೆ. ಅಲ್ಲಿ ಜಿಲ್ಲಾ ಮಟ್ಟದ ಏರ್ಪೋರ್ಟ್ ಮಾಡಬಹುದೇ ವಿನಾ ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವುದಿಲ್ಲ. ಬಿಜೆಪಿಯ ಅರವಿಂದ ಬೆಲ್ಲದ್ ಕೂಡ ಉತ್ತರ ಕರ್ನಾಟಕಕ್ಕೆ ಅನುಕೂಲವಾಗುವ ಜಾಗದಲ್ಲಿ ಹೊಸ ಏರ್ಪೋರ್ಟ್ ಬರಲಿ ಎನ್ನುತ್ತಿದ್ದಾರೆ. ಕೇವಲ ಜಾಗವನ್ನು ಕೊಟ್ಟ ಮಾತ್ರಕ್ಕೆ  ಎಲ್ಲವೂ ಆಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಸುಪ್ರೀಂಕೋರ್ಟಿನಲ್ಲಿ ಪರಿಸರ ಇಲಾಖೆಯ ಅನುಮತಿ ಸಂಬಂಧ ಒಂದು ಪ್ರಕರಣವಿದೆ. ಅದು ಸದ್ಯದಲ್ಲೇ ಇತ್ಯರ್ಥಗೊಳ್ಳುವ ಲಕ್ಷಣಗಳಿವೆ. ಇದಾದರೆ, ಇನ್ನು 6 ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಯರಡ್ಡಿ ಮಾತನ್ನು ಪಕ್ಷ ಗಮನಿಸಲಿದೆ :

ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರದಲ್ಲಿ ಯಾರಾರು ಭಾಗಿಯಾಗಿದ್ದಾರೆ ಎನ್ನುವುದನ್ನೂ ಅವರು ಹೇಳಬೇಕಿತ್ತು. ಅವರ ಮಾತುಗಳನ್ನು ಪಕ್ಷವು ಗಮನಿಸಿದೆ. ಯಾರೂ ಪಕ್ಷಕ್ಕಿಂತ ದೊಡ್ಡವರಿಲ್ಲ ಎಂದು ಅವರು ಹೇಳಿದ್ದಾರೆ.

ಅಹಮದಾಬಾದ್ ಎಐಸಿಸಿ ಅಧಿವೇಶನದಲ್ಲಿ ಪಕ್ಷವು ಬಡವರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು ನಿರ್ಣಯಗಳನ್ನು ತೆಗೆದುಕೊಂಡಿದೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮಕ್ಕೆ ಪಕ್ಷದಲ್ಲಿ ಕೆಲವು ಅಪವಾದಗಳೂ ಇವೆ. ಅನುಭವ ಮತ್ತು ಹಿರಿತನಗಳ ಮೇಲೆ ಇಂತಹ ವಿನಾಯಿತಿ ಕೊಡಬೇಕಾಗುತ್ತದೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.

KEY WORDS: Airports Authority of India, AAI, second airport, Bangalore

A high-level team of the Airports Authority of India (AAI), which has inspected all the three locations for the proposed second airport near the capital, is likely to give its views in a month.