ಯೋಗೇಶ್ವರ್ ರಿಂದ ನಮ್ಮ ಆಫರ್ ತಿರಸ್ಕಾರ: ನಿಖಿಲ್ ಅಭ್ಯರ್ಥಿಯಾಗಲಿ- ಮಾಜಿ ಶಾಸಕ ಆಗ್ರಹ

ರಾಮನಗರ,ಅಕ್ಟೋಬರ್,21,2024 (www.justkannada.in): ಸಿ.ಪಿ.ಯೋಗೇಶ್ವರ್ ಅವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆಗೆ ಒಪ್ಪುತ್ತಿಲ್ಲ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ‌ ಮಾಜಿ ಶಾಸಕ ಎ.ಮಂಜುನಾಥ್ ಆಗ್ರಹಿಸಿದರು.

ಇಂದು  ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಎ. ಮಂಜುನಾಥ್,  ಬಹಳ ದಿನಗಳಿಂದ ಬೈ ಎಲೆಕ್ಷನ್ ಮೈತ್ರಿ ಅಭ್ಯರ್ಥಿ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇದು ಜೆಡಿಎಸ್ ಕ್ಷೇತ್ರ, ಜೆಡಿಎಸ್ ಗೆ ಉಳಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯ. ಹಾಗಾಗಿ ಯಾರೇ ಸ್ಪರ್ಧೆ ಮಾಡಿದರೂ ಜೆಡಿಎಸ್ ನಿಂದ ಸ್ಪರ್ಧೆ ಮಾಡಬೇಕು ಎಂದರು.

ಸಿ.ಪಿ.ಯೋಗೇಶ್ವರ್ ಅವರೂ ಕೂಡಾ ಮೈತ್ರಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಾಗಾಗಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಿ ಅಂತ ಸಿ.ಪಿ.ಯೋಗೇಶ್ವರ್ ಗೂ ತಿಳಿಸಿದ್ದೇವೆ. ಆದರೆ ಸಿ.ಪಿ.ಯೋಗೇಶ್ವರ್ ಅವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆಗೆ ಒಪ್ಪುತ್ತಿಲ್ಲ. ಯೋಗೇಶ್ವರ್ ನಮ್ಮ ಆಫರ್ ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ಇಡೀ ಜೆಲ್ಲೆಯ ನಾಯಕರು ಕೂತು ತೀರ್ಮಾನ ಮಾಡಿದ್ದೇವೆ. ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಅಭ್ಯರ್ಥಿ ಮಾಡಬೇಕು. ನಿಖಿಲ್ ಮೈತ್ರಿ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿ ಎಂದು  ಜೆಡಿಎಸ್ ಹಾಗೂ ಬಿಜೆಪಿ ವರಿಷ್ಠರಿಗೆ ಮಾಜಿ ಶಾಸಕ ಎ.ಮಂಜುನಾಥ್ ಮನವಿ ಮಾಡಿದರು.

ಎರಡು ಬಾರಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಈ ಬಾರಿ ಅವರಿಗೆ ಅವಕಾಶ ಕೊಟ್ಟರೆ  ಜೆಡಿಎಸ್ ಕೂಡಾ ಉಳಿಯುತ್ತೆ, ಪಕ್ಷ ಕೂಡಾ ಸಂಘಟನೆ ಆಗುತ್ತೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಅನಿವಾರ್ಯ ಆಗಿದೆ. ನಾವು ಅವರನ್ನ ಒಪ್ಪಿಸುವ ಕೆಲಸ ಮಾಡ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

Key words: alliance candidate, Channapatna , Nikhil Kumaraswamy, Former MLA