ಡಾ.ಬಿ.ಆರ್ ಅಂಬೇಡ್ಕರ್‌ ಚಿಂತನೆಗಳನ್ನು ಎಲ್ಲರೂ ಪಾಲಿಸೋಣ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

ಮೈಸೂರು, ಏಪ್ರಿಲ್, 14, 2025 (www.justkannada.in): “ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಚಿಂತನೆಗಳನ್ನು ನಾವೆಲ್ಲಾ ಜೀವನದಲ್ಲಿ ಪಾಲಿಸಬೇಕು” ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ದೇಶದ ಜನರಿಗೆ ಭದ್ರ ಬುನಾದಿ ಹಾಕಿಕೊಡಲು ಪ್ರಪಂಚದಾದ್ಯಂತ ಸಂಚರಿಸಿ, ಅಪಾರವಾ ಅಧ್ಯಯನವನ್ನು ನಡೆಸಿದ ಅಂಬೇಡ್ಕರ್‌ ಅವರು ಭಾರತೀಯರಿಗೆ ಶ್ರೇಷ್ಠ ಸಂವಿಧಾನ ನೀಡಿದರು. ಆ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ, ವಾಕ್ ಸ್ವಾತಂತ್ರ್ಯ ಕಲ್ಪಿಸಿದ್ದಾರೆ. ಅಂಬೇಡ್ಕರ್‌ ಅವರ ದೀರ್ಘಕಾಲದ ಅಧ್ಯಯನ, ಅನೇಕ ವಿಚಾರಗಳು ಇಂದಿಗೂ ಜೀವಂತವಾಗಿದ್ದು, ಅವರ ಚಿಂತನೆಗಳು, ವಿಚಾರಗಳನ್ನು ನಾವುಗಳು ಜೀವನದಲ್ಲಿ ಪಾಲನೆ ಮಾಡಬೇಕಿದೆ” ಎಂದರು.

ಸೆಸ್ಕ್‌ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, “ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಇಡೀ ವಿಶ್ವವೇ ಮೆಚ್ಚುವ ಶ್ರೇಷ್ಠ ಸಂವಿಧಾನವನ್ನು ಭಾರತೀಯರಿಗೆ ನೀಡಿದ್ದಾರೆ. ಅಂಬೇಡ್ಕರ್‌ ಅವರು ಭಾರತ ಕಂಡ ಅತ್ಯುನ್ನತ ಹಾಗೂ ಮಾನವರಿಗೆ ಸಮಾನತೆ ನೀಡಿದ ದೈವಿ ಪುರುಷರಾಗಿದ್ದು, ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿಯೂ ಆಚರಿಸಲಾಗುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ ಶಾಖೆ) ಶರಣಮ್ಮ ಎಸ್‌. ಜಂಗಿನ್‌, ಪ್ರಧಾನ ವ್ಯವಸ್ಥಾಪಕರು(ಆ ಮತ್ತು ಮಾ. ಸಂ) ಬಿ.ಆರ್. ರೂಪ‌, ಮುಖ್ಯ ಪ್ರಧಾನ ವ್ಯವಸ್ಥಾಪಕರು(ಆಂತರಿಕ ಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರು(ಖರೀದಿ) ಎಲ್‌. ಲೋಕೇಶ್‌ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Key words: follow Dr. B.R. Ambedkar, thoughts, MLA, Ramesh Bandisidde Gowda