ಪ್ರಕೃತಿಗೆ ಯಾರಾದರೂ ಬುದ್ದಿ ಹೇಳುವುದಕ್ಕೆ ಆಗುತ್ತಾ? ಕೇಂದ್ರ ಸಚಿವ ಹೆಚ್ ಡಿಕೆಗೆ ಡಿಸಿಎಂ ಡಿಕೆಶಿ ತಿರುಗೇಟು

ಬೆಂಗಳೂರು,ಅಕ್ಟೋಬರ್,16,2024 (www.justkannada.in):  ಮಳೆ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಿಮ್ಮ ರಾಜ್ಯದ ಗೌರವವನ್ನು ನೀವೇ ಹಾಳು ಮಾಡುತ್ತಿದ್ದೀರಿ. ಪ್ರಕೃತಿಗೆ ಯಾರಾದರೂ ಬುದ್ದಿ ಹೇಳುವುದಕ್ಕೆ ಆಗುತ್ತಾ? ಎಂದು ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷದವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ನಿಮ್ಮ ರಾಜ್ಯದ ಗೌರವವನ್ನು ನೀವೇ ಯಾಕೆ ಹಾಳು ಮಾಡುತ್ತಿದ್ದೀರಿ. ಮಳೆ ಹೆಚ್ಚಾಗಿದೆ. ಮಳೆ ಬರಬೇಕು ಚಂಡಮಾರುತ  ಆಗಿದೆ.  ಪ್ರಕೃತಿಗೆ ಯಾರಾದರು ಬುದ್ಧಿ ಹೇಳಲು ಆಗುತ್ತಾ? ಮಳೆಯಿಂದ ಸಮಸ್ಯೆಯಾದರೆ ನಿಭಾಯಿಸುವ ಶಕ್ತಿ ಸರ್ಕಾರಕ್ಕಿದೆ, ಜನರಿಗಿದೆ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿರುವ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ಬೆಂಗಳೂರಿಗರು ಮುಂಜಾಗೃತೆ ವಹಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಳೆ ಹೆಚ್ಚುತ್ತಿದೆ. ಜನರು ಮುಂಜಾಗೃತೆಯಿಂದ ಇರುವಂತೆ ಮನವಿ ಮಾಡುತ್ತೇನೆ. ಮುನೆಚ್ಚರಿಕೆ ಕ್ರಮವಾಗಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಟ್ರ್ಯಾಫಿಕ್ ಸಮಸ್ಯೆಯಾಗಬಹುದು, ಬೇರೆ ಸಮಸ್ಯೆಗಳು ಎದುರಾಗಬಹುದು. ಜನರು ಎಚ್ಚರದಿಂದ ಇರಬೇಕು. ಸಂಜೆ ಮತ್ತೊಮ್ಮೆ ಬೆಂಗಳೂರಿನಲ್ಲಿ ರೌಂಡ್ಸ್ ಹಾಕುತ್ತೇನೆ ಎಂದು ತಿಳಿಸಿದ್ದಾರೆ.

Key words: Bangalore, rain, DCM, DK Shivakumar, Union Minister, HDK