10 ವರ್ಷಗಳ ಬಳಿಕ ಭರಚುಕ್ಕಿ ಜಲಪಾತೋತ್ಸವ: ಆ.10 ರಂದು ಸಿಎಂ ಚಾಲನೆ

ಚಾಮರಾಜನಗರ,ಆಗಸ್ಟ್,8,2024 (www.justkannada.in):   ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮುಂಗಾರು ಮಳೆಯಾಗಿದ್ದು ಜಲಪಾತ, ಜಲಾಶಯಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 10 ರಂದು  ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತೋತ್ಸವ ಆಯೋಜಿಸಲಾಗಿದೆ.

10 ವರ್ಷಗಳ ಬಳಿಕ ಚಾಮರಾಜನಗರ ಜಿಲ್ಲಾಡಳಿತ ಎರಡು ದಿನಗಳ ಕಾಲ ಭರಚುಕ್ಕಿ  ಜಲಪಾತೋತ್ಸವ ನಡೆಸುತ್ತಿದ್ದು ಆಗಸ್ಟ್ 10 ರಂದು ಸಂಜೆ 5 ಗಂಟೆಗೆ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸಚಿವರಾದ ಹೆಚ್.ಸಿ ಮಹದೇವಪ್ಪ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಧುಮ್ಮಿಕ್ಕುವ ಜಲಪಾತಕ್ಕೆ ಶಬ್ಧ ಮತ್ತು ಬೆಳಕಿನ್ನು ಸಂಯೋಜನೆ ಮಾಡಲಿದ್ದು, ಇದರಿಂದ ಜಲಪಾತ ಮತ್ತಷ್ಟು ಆಕರ್ಷಕ ಆಗಿರಲಿದೆ. ಇನ್ನು, ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದೆ. ಜಾನಪದಗಳ ನಾಡು ಎಂದೇ ಚಾಮರಾಜನಗರವನ್ನು ಕರೆಯುವ ಹಿನ್ನೆಲೆ ಜಾನಪದ ಸಂಗೀತ ಸುಧೆಯೂ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Bharachukki waterfall,  festival, CM, August 10