ಪಾದಯಾತ್ರೆಯಲ್ಲಿ ಭಾಗವಹಿಸಿರುವ ಘಟಾನುಘಟಿ ನಾಯಕರು ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ-ಎಂ.ಕೆ ಸೋಮಶೇಖರ್

ಮೈಸೂರು,ಆಗಸ್ಟ್,6,2024 (www.justkannada.in): ಬಿಜೆಪಿ ಜೆಡಿಎಸ್ ನವರು ಮಾಡುತ್ತಿರುವ ಪಾದಯಾತ್ರೆ ಅವರ ತಪ್ಪಿನ  ಪ್ರಾಯಶ್ಚಿತ್ತಕ್ಕಾಗಿ ಮಾಡುತ್ತಿರುವ ಪಾದಯಾತ್ರೆ. ಪಾದಯಾತ್ರೆಯಲ್ಲಿ ಭಾಗವಹಿಸಿರುವ ಘಟಾನುಘಟಿ ನಾಯಕರು ತಮ್ಮ ಬೇನಾಮಿ ಆಸ್ತಿ ಘೋಷಣೆ ಮಾಡಲಿ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆಗ್ರಹಿಸಿದರು.

ಬಿಜೆಪಿ ಜೆಡಿಎಸ್ ಪಾದಯಾತ್ರೆ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಕೆ ಸೋಮಶೇಖರ್, ಬಿಜೆಪಿ ಜೆಡಿಎಸ್ ನವರ  ಕಾಲದಲ್ಲಿ ಮಾಡಿದ ಭ್ರಷ್ಟಾಚಾರಕ್ಕೆ ಪ್ರಾಯಶ್ಚಿತ್ತವಾದ ಪಾದಯಾತ್ರೆ. ಇವರು ಮಾಡುತ್ತಿರುವ ಪಾದಯಾತ್ರೆ ಬರಿ ಡೋಂಗಿ ಪಾದಯಾತ್ರೆ. ಅಲ್ಲಿ ಭಾಗವಹಿಸುವ ಜನ ಸ್ಥಳೀಯ ರಲ್ಲ. ಬೇರೆ ಎಲ್ಲಿಂದಲೋ ಹಣ ಕೊಟ್ಟು ಕರೆತಂದು ಪಾದಯಾತ್ರೆಯಲ್ಲಿ ಸೇರಿದ್ದಾರೆ. ಇದೊಂದು ವಿಜಯೇಂದ್ರ, ಎಚ್. ಡಿಕೆ ಅವರ ಪ್ರಯೋಜಕತ್ವದ ಪಾದಯಾತ್ರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ. ಅವರು ಒಬ್ಬ ಪಾರದರ್ಶಕ ಆಡಳಿತ ಕೊಡುತ್ತಿರುವ ಸಿಎಂ. ಆದರೆ ವಿನಾ ಕಾರಣ ಸಿಎಂ ಸಿದ್ದರಾಮಯ್ಯ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸಿರುವ ಘಟಾನುಘಟಿ ನಾಯಕರಿದ್ದರಲ್ಲ ಅವರೆಲ್ಲ ತಮ್ಮ ಬೇನಾಮಿ ಆಸ್ತಿಗಳನ್ನ ಘೋಷಣೆ ಮಾಡಲಿ. ಸಿಎಂ ಜನಪ್ರಿಯತೆ ನೋಡಿ ಸಹಿಸಿಕೊಳ್ಳಲಾಗದೆ ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ ಈ ಬಿಜೆಪಿ ಜೆಡಿಎಸ್ ನವರೇ ಬೆತ್ತಲಾಗುತ್ತಿದ್ದಾರೆ. ಇವರು ಎಷ್ಟು ಪ್ರಾಮಾಣಿಕರು ಎಂಬುದನ್ನ ಆತ್ಮಾವಲೋಕನ‌ಮಾಡಿಕೊಳ್ಳಬೇಕಿದೆ. ಇವರು ಏನೇ ಪ್ರಯತ್ನ ಮಾಡಿದರೂ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಅವರ ವ್ಯರ್ಥ ಪ್ರಯತ್ನವೇ ಹೊರತು ಅದು ಯಾವುದೇ ಕಾರಣಕ್ಕೂ ಯಶಸ್ವಿ ಆಗಲ್ಲ. ಅಲ್ಲಿ ತಪ್ಪು ನಡೆದಿದ್ದರೇ ತಾನೇ ಸಿಎಂ ರಾಜಿನಾಮೆ ಕೊಡೋಕೆ. ನಿವೇಶನ ಹಂಚಿಕೆ ಆಗಿರುವುದು ಬಿಜೆಪಿ ಅವರ ಕಾಲದಲ್ಲೇ. ಸಿದ್ದರಾಮಯ್ಯ ಅವರ ಕುಟುಂಬ ನಮಗೆ ನಿವೇಶನ ಕೊಡಿ ಅಂತ ಎಲ್ಲೂ ಕೇಳಿಲ್ಲ. ಅವರು ಎಲ್ಲೂ ತಪ್ಪು ಮಾಡಿಲ್ಲ. ಸಿದ್ದರಾಮಯ್ಯ ಅವರ ಏಳಿಗೆ ಸಹಿಸಲಾಗದೆ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ಸಿಎಂ ಕುರ್ಚಿಗೆ ಯಾವುದೇ ಧಕ್ಕೆ ಆಗಲ್ಲ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಹೇಳಿದರು.

Key words: BJP-JDS, Padayatra, mysore, MK Somashekhar