ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ

ಬೆಂಗಳೂರು,ಮಾರ್ಚ್,3,2025 (www.justkannada.n): ರಾಜ್ಯದಲ್ಲಿ ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಶುರುವಾಗಲಿದ್ದು, ಆಡಳಿತ ಪಕ್ಷ ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ.

ಇಂದು ಬೆಳಗ್ಗೆ 11ಕ್ಕೆ ಉಭಯ ಸದನಗಳ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರಿಗೆ ಬೀಳ್ಕೊಟ್ಟ ಬಳಿಕ ಕಲಾಪ ಆರಂಭವಾಗಲಿದೆ. ಬಳಿಕ‌ ಇತ್ತೀಚಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಿದ್ದಾರೆ.

ನಾಳೆಯಿಂದ ಗುರುವಾರದವರಗೆ ರಾಜ್ಯಪಾಲರ ಭಾಷಣದ ಮೇಲಿನ‌ ಚರ್ಚೆ ನಡೆಯಲಿದ್ದು, ಈ ವೇಳೆ ಆಡಳಿತ ಪಕ್ಷ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ನಡೆಯಲಿದೆ. ಆಡಳಿತರೂಢ ಪಕ್ಷ ಕಟ್ಟಿಹಾಕುಲು ವಿಪಕ್ಷಗಳು ತಯಾರಿ ನಡೆಸಿದ್ದು, ರಾಜ್ಯಪಾಲರ  ಸರ್ಕಾರದ ನಡುವಿನ ಜಟಾಪಟಿ, ಕಾನೂನು ಸುವ್ಯವಸ್ಥೆ, ಮೈಕ್ರೋ ಫೈನಾನ್ಸ್ ಕಿರುಕುಳ, ಬಾಣಂತಿ ಸಾವು, ಶಾಸಕರಿಗೆ ಅನುದಾನ ಕೊರತೆ, ಬಸ್, ಮೆಟ್ರೋ ಪ್ರಯಾಣ ದರ ಏರಿಕೆ, ವಿದ್ಯುತ್, ಹಾಲು, ನೀರಿನ ಬೆಲೆ ಏರಿಕೆ ಮುಡಾ ಹಗರಣ ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರಗಳಾಗಿವೆ.

ವಿಪಕ್ಷಕ್ಕೆ ತಿರುಗೇಟು ಕೊಡಲು ಆಡಳಿತ ಪಕ್ಷ ಪ್ರತ್ಯಸ್ತ್ರ ಇಟ್ಟುಕೊಂಡಿದ್ದು,  ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ, ತೆರಿಗೆ ಪಾಲಿನ ವಂಚನೆ ಕುರಿತು ದಾಳಿ, ಕೋವಿಡ್ ಹಗರಣ ಕುನ್ಹ ಸಮಿತಿ ವರದಿ, ಎಚ್.ಡಿ ಕುಮಾರಸ್ವಾಮಿ ವಿರುದ್ಧ ಪ್ರಕರಣಗಳ ಪ್ರಸ್ತಾಪ ಮಾಡಲಿದ್ದಾರೆ.

ಮೇಕೆದಾಟು, ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಯೋಜನೆಗೆ ಸ್ಪಂದಿಸದ ಕೇಂದ್ರ ಸರ್ಕಾರ ಮುಂತಾದ ವಿಚಾರಗಳ ಇಟ್ಟು ಪ್ರತ್ಯುತ್ತರ ಕೊಡಲು ಆಡಳಿತ ಪಕ್ಷ ಸಜ್ಜಾಗಿದೆ. ಈ ನಡುವೆ ನಾಳೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು,  ಮಾ.7 ರಂದು ಬಜೆಟ್ ಮಂಡನೆಯಾಗಲಿದೆ. ಮುಂದಿನ ವಾರ ಮುಂಗಡ ಪತ್ರದ ಮೇಲೆ ಉಭಯ ಸದನಗಳಲ್ಲಿ ಸುಧೀರ್ಘ ಚರ್ಚೆ ನಡೆಯಲಿದೆ.

Key words: Budget session, Assembly, today