ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು: ವೈದ್ಯರ ವಿರುದ್ಧ ಆಕ್ರೋಶ

ಚಾಮರಾಜನಗರ,ಸೆಪ್ಟಂಬರ್,19,2024 (www.justkannada.in): ವೈದ್ಯರ ನಿರ್ಲಕ್ಷ್ಯದಿಂದ  ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

ಕಂದೇಗಾಲ ಗ್ರಾಮದ ವೀರಭದ್ರಪ್ಪ ಎಂಬುವರ ಪತ್ನಿ ಶ್ರುತಿ ಹೆರಿಗೆಗೆ  ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭಿಣಿ ಶೃತಿ ಅವರು ಈ ಹಿಂದಿನಿಂದಲೂ ಅಲ್ಲೇ ಪರೀಕ್ಷೆ ಮಾಡಿಸುತ್ತಿದ್ದರು. ಈ ನಡುವೆ ನಿನ್ನೆ ಹೆರಿಗೆಗೆ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸಮಯಕ್ಕೆ ಸರಿಯಾಗಿ ವೈದ್ಯರಿಲ್ಲದೆ ಹೆರಿಗೆಗೂ ಮುನ್ನ ಮಗು ಸಾವನ್ನಪ್ಪಿದೆ.

ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಅರುಣ್ ರಜೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಬೇರೆ ವೈದ್ಯರು ಸೂಚನೆ ನೀಡಿದ್ದಾರೆ. ಈ ವೇಳೆ ಕುಟುಂಬಸ್ಥರು ಗರ್ಭಿಣಿ ಶೃತಿ ಅವರನ್ನ ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ಆ್ಯಂಬುಲೆನ್ಸ್ ಕೂಡ ಇಲ್ಲದೆ ಪರದಾಟ ನಡೆಸಿದ್ದಾರೆ.

ಈ ಸಮಯದಲ್ಲಿ ವೈದ್ಯಾಧಿಕಾರಿಗಳು ತಡವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನಮ್ಮ ಮಗು ಸಾವಿಗೀಡಾಗಿದೆ. ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಗಳ, ವೈದ್ಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ  ಮಗು ಕಳೆದುಕೊಂಡ ವೀರಭದ್ರಪ್ಪ ಅವರು ಡಿಎಚ್ಓ ಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಪ್ರಸೂತಿ ತಜ್ಞ ಡಾ.ಅರಣ್ ಕುಮಾರ್ ಮೇಲೆ ದೂರು ಸಲ್ಲಿಕೆಯಾಗಿದ್ದು ಸರಿಯಾಗಿ ಸ್ಪಂದಿಸದ ವೈದ್ಯರು, ಸಿಬ್ಬಂದಿಗಳ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Child, dies, pregnant,Outrage, against, doctors