ಮಕ್ಕಳು ಪರಿಸರ ಸಹಜ ಶಿಕ್ಷಣಕ್ಕೆ ಮರಳಬೇಕಿದೆ : ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು

ಮೈಸೂರು,ಅಕ್ಟೋಬರ್,24,2024 (www.justkannada.in):  ರಂಗಾಯಣವು ಮಕ್ಕಳನ್ನು, ಪೋಷಕರನ್ನು ಮತ್ತು ಶಿಕ್ಷಕರನ್ನು ಪ್ರಯೋಗದೊಡನೆ ಅನುಸಂಧಾನ ಮಾಡಬೇಕು ಮತ್ತು ಪ್ರಸ್ತುತ ಅಂಗೈ ಜಗತ್ತಿನಲ್ಲಿ ಶಿಕ್ಷಣ ಸಿಗುತ್ತಿದೆ.  ಇದು ಪರಿಸರ ಸಹಜ ಶಿಕ್ಷಣಕ್ಕೆ ಮರಳಬೇಕಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ನುಡಿದರು.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಆರ್.ಎಲ್.ಎಚ್.ಪಿ ಮೈಸೂರು ಮತ್ತು ಯುನೆಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಸಂಸತ್ 24 ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಗಾರವನ್ನು ಉದ್ಘಾಟಿಸಿ ಸತೀಶ್ ತಿಪಟೂರು ಮಾತನಾಡಿದರು. ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶಗಳು ಮತ್ತು ಮಕ್ಕಳಿಗಿರುವ ಸೌಲಭ್ಯಗಳನ್ನು ನಾವೆಲ್ಲರೂ ಒದಗಿಸಿಕೊಡಬೇಕು. ಮಕ್ಕಳ ಪ್ರಸ್ತುತ ಸ್ಥಿತಿಯಲ್ಲಿ ಅವರ ವಿಕಾಸ ಹೇಗೆ ಎಂದು ನೋಡಲು ಇದು ಸರಿಯಾದ ಕಾಲ ಎಂದು ಅನಿಸುತ್ತದೆ. ಭಾಗವಹಿಸುವಿಕೆಯು ವಿಕಾಸದ ಭಾಗವಾಗಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮೈಸೂರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಧನಂಜಯ ಎಲಿಯೂರು ಅವರು,  ಮಕ್ಕಳಿಗೆ ವಿಶ್ವ ಮಕ್ಕಳ ಒಡಂಬಡಿಕೆ ಜಾರಿ ಹಿನ್ನೆಲೆ ಮತ್ತು ಪ್ರಮುಖ ಹಕ್ಕುಗಳು ಕರ್ತವ್ಯಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ.ವಿಯ ವಿಶ್ರಾಂತ ಕುಲಪತಿಗಳಾದ ಸಬೀಹ ಭೂಮಿಗೌಡ ವಹಿಸಿದ್ದರು.

ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಯೋಗೇಶ್ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ,  ಪ್ರಸನ್ನ ಕುಮಾರ್ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ ಮೈಸೂರು ನಗರ, ಪ್ರೊ. ಭೂಮಿಗೌಡ,  ಮಕ್ಕಳ ಪ್ರತಿನಿಧಿಯಾಗಿ ಕುಮಾರಿ ಹೇಮಾ ಹಾಗೂ ರಿತೇಶ್, ವಿವಿಧ ತಾಲೂಕುಗಳಿಂದ ಆಗಮಿಸಿದಂತಹ 35 ಮಕ್ಕಳು, 15 ಶಿಕ್ಷಕರು, ಪೋಷಕರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Key words: Children, return, environment-friendly education, Satish Tipaturu