ಸರ್ಕಾರಕ್ಕೆ ರಾಜೀನಾಮೆ ಕೊಡುವ ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕ.

ವಿಜಯಪುರ,ನವೆಂಬರ್ ,7,2023(www.justkannada.in):  ನನ್ನ ಕ್ಷೇತ್ರದ ಗ್ರಾಮಗಳಿಗೆ ನೀರು ಬಿಡದಿದ್ದರೆ ರಾಜೀನಾಮೆ ನೀಡುವುದಾಗಿ ತಮ್ಮದೇ ಸರ್ಕಾರಕ್ಕೆ  ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕರ ಯಶವಂತರಾಯಗೌಡ, ಇಂಡಿ ತಾಲೂಕಿನ ಕಟ್ಟಕಡೆಯ ಹಳ್ಳಿಗಳಿಗೂ ಕಾಲುವೆ ನೀರು ಬಂದಿಲ್ಲ, ಗುತ್ತಿ ಬಸವಣ್ಣ ಏತ ನೀರಾವರಿ, ಇಂಡಿ ಶಾಖಾ ಕಾಲುವೆಯಿಂದ ನೀರು ಹರಿಸಬೇಕು. ಒಂದು ವೇಳೆ ನನ್ನ ಕ್ಷೇತ್ರಕ್ಕೆ ನೀರು ಬರದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಕ್ಷೇತ್ರದ ಜನರಿಗೆ ಅನುಕೂಲ ಆಗದಿದ್ದರೆ ನಾಳೆಯೇ ರಾಜೀನಾಮೆ ನೀಡುವೆ. ನಾಡಿದ್ದು ರಾಜಕೀಯದಿಂದಲೇ ನಿವೃತ್ತಿಯಾಗುವೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ವಿರುದ್ಧವೂ ಆಕ್ರೋಶ ಹೊರಹಾಕಿದ ಶಾಸಕ ಯಶವಂತರಾಯಗೌಡ ಪಾಟೀಲ್, ಬರ ಮಧ್ಯೆ ಇಂಡಿ ಕ್ಷೇತ್ರದ ಕಟ್ಟ ಕಡೆಯ ಹಳ್ಳಿಗಳಿಗೆ ಕಾಲುವೆ ನೀರು ಬಂದಿಲ್ಲ. ತಮ್ಮ ಕ್ಷೇತ್ರ ಕಟ್ಟ ಕಡೆಯ ರೈತರಿಗೆ ನೀರು ಸಿಗುತ್ತಿಲ್ಲ. ನನ್ನ ಕ್ಷೇತ್ರದ ಜನರಿಗೆ ನೀರು ಸಿಗದೆ ಹೋದರೆ ಯಾವ ಹಂತಕ್ಕೆ ಹೋಗಲು ಸಿದ್ಧ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಯಬೇಕಿದೆ. ಆದರೆ 22 ವರ್ಷದಿಂದ ಇಂಡಿ ಕ್ಷೇತ್ರದ ಕಾಲುವೆಗಳಿಗೆ ನೀರು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Congress MLA – warned – resign – government