ಮೈಸೂರು,ಮಾರ್ಚ್,31,2025 (www.justkannada.in): ಅಕ್ರಮ ಮದ್ಯ ಸೇವಿಸಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ಸಿಎಂ ತವರು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ನಾಗಣಪುರ ಆದಿವಾಸಿ ಕಾಲೋನಿಯ ರಾಜು (54) ಮೃತ ವ್ಯಕ್ತಿ. ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಸಿಗುವ ಅಕ್ರಮ ಮದ್ಯ ಸೇವಿಸಿ ರಾಜು ಸಾವನ್ನಪ್ಪಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿಯೇ ರಾಜು ಮೃತಪಟ್ಟಿದ್ದಾರೆ.
ಕಳೆದ 20 ದಿನಗಳ ಹಿಂದೆ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ಹದಿನೈದು ದಿನದ ಹಿಂದೆ ಬಳ್ಳೂರ ಹುಂಡಿ ಗ್ರಾಮದ ಮಹದೇವ ಬಲಿಯಾಗಿದ್ದರು. ಇದೀಗ ಅಕ್ರಮ ಮದ್ಯ ಸೇವಿಸಿ ಮೂರನೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಸೂಕ್ತ ಕ್ರಮ ಜರುಗಿಸದೆ ಅಧಿಕಾರಿಗಳು ಹಿಂದಿರುಗಿದ್ದರು. ಇದೀಗ ಅಕ್ರಮ ಮದ್ಯ ಸೇವನೆಗೆ ಮತ್ತೊಂದು ಬಲಿಯಾಗಿದೆ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
Key words: Another, death, consuming, illicit liquor, mysore