ಮೈಸೂರಿನಲ್ಲಿ ಡೆಂಗ್ಯೂಗೆ ಸಮುದಾಯ ಆರೋಗ್ಯಾಧಿಕಾರಿ ಬಲಿ

ಮೈಸೂರು,ಜುಲೈ,4,2024 (www.justkannada.in): ಮೈಸೂರಿನಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದ್ದು ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ ಅವರು ಡೆಂಗ್ಯುವಿನಿಂದ ಸಾವನ್ನಪ್ಪಿದ್ದಾರೆ ಎಂದು  ಜಿಲ್ಲಾ ಆರೋಗ್ಯಧಿಕಾರಿ ಡಾ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಕುಮಾರಸ್ವಾಮಿ, ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ನಾಗೇಂದ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಗೇಂದ್ರರ ಪತ್ನಿ ಕೂಡ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ನಾಗೇಂದ್ರ ಅವರು ಇತ್ತೀಚೆಗೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ತಪಾಸಣೆ ಬಳಿಕ ಡೆಂಗ್ಯು ಇರುವುದು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗೇಂದ್ರ ಸಾವನ್ನಪ್ಪಿದ್ದಾರೆ ಎಂದರು.

ಜನರು ಜ್ವರ ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದ್ರವ ರೂಪದ ಆಹಾರವನ್ನು ಸೇವಿಸಬೇಕು. ಡೆಂಗ್ಯು ಜ್ವರ ಬಂದಾಕ್ಷಣ ಗಾಬರಿಗೊಳ್ಳಬಾರದು, ಆತಂಕಕ್ಕೀಡಾಗಬಾರದು ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Key words: dengue, death, Mysore