ನಾಳೆ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ ಸಂವಾದ ಕಾರ್ಯಕ್ರಮ

ಮೈಸೂರು, ಜುಲೈ,19,2024 (www.justkannada.in): ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸರಣಿ ಕಾರ್ಯಕ್ರಮದಲ್ಲಿ ಲೇಖಕಿ, ಕವಯಿತ್ರಿ ಸುಜಾತ ಹೆಚ್.ಆರ್ ಅವರೊಂದಿಗೆ ‘ಮಣಿಬಾಲೆ’ ಕಾದಂಬರಿಯ ಸಂವಾದ ಕಾರ್ಯಕ್ರಮ  ಜುಲೈ 20ನೇ ಶನಿವಾರ ಸಂಜೆ 5 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ನಡೆಯಲಿದೆ.

ಅಂಕಣ, ಕವಿತೆ, ಕಥೆ, ಕಾದಂಬರಿ ಸೇರಿದಂತೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಜೊತೆಗೆ ತಮ್ಮ ವಿನೂತನ ಶೈಲಿಯಿಂದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಸಾಹಿತಿಗಳಲ್ಲೊಬ್ಬರು. ಇವರ ‘ನೀಲಿ ಮೂಗಿನ ನತ್ತು’ ಚೊಚ್ಚಲ ಕೃತಿಗೆ ಅಮ್ಮ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅಲ್ಲದೆ, ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲೂ ಇವರ ಬರಹಗಳು ಪಠ್ಯಪುಸ್ತಕಕ್ಕೆ ಸೇರ್ಪಡೆಯಾಗಿವೆ. ‘ಕಾಡುಜೇಡ ಹಾಗೂ ಬಾತುಕೋಳಿ ಹೂ’, ‘ಪದುಮ ಪುರುಷ’, ‘ಜೇನುಮಲೆಯ ಹೆಣ್ಣು’ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಷ್ಯಾದ ಹೀರೋ ಮತ್ತು ಟೈಮ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಕೃಷಿಸಂತ ಎಲ್.ನಾರಾಯಣರೆಡ್ಡಿ ಅವರ ಜೀವನ ಸಾಧನೆ ಕುರಿತ ‘ಸರಳ-ವಿರಳ’ ಸಾಕ್ಷ್ಯಚಿತ್ರದ ನಿರ್ಮಾಪಕರೂ ಹೌದು.

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ಪ್ರತಿ ಶನಿವಾರ ‘ಪದಸಾರ’ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದೆ. ಕವನ, ಕಥೆ, ನಾಟಕಗಳ ವಾಚನವು ಜನಮೆಚ್ಚುಗೆಗೆ ಪಾತ್ರವಾಗಿದೆ. ಓದುವ ಆಸಕ್ತರು ಯಾರಿದ್ದರೂ ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಸಲುವಾಗಿ ಇನ್ನಿತರ ಹೊಸ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತಿದೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ನಿವೃತ್ತರಾದ ಹೆಚ್. ಎಂ. ಕಲಾಶ್ರೀ ಅವರು ಸಂವಾದವನ್ನು ನಡೆಸಿಕೊಡಲಿದ್ದಾರೆ. ಅಂತೆಯೇ ರಂಗ ಕಲಾವಿದರಾದ ದುರ್ಗಾ ಪರಮೇಶ್, ಸ್ವರೂಪ್, ನಾಗೇಂದ್ರ ಸೇರಿದಂತೆ ಅನೇಕರು ಹೆಚ್. ಆರ್. ಸುಜಾತ ಅವರ ಕವನಗಳನ್ನು ವಾಚಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 97402 41490

Key words: Discussion, program, author, poetess, Sujata HR