ಮೈಸೂರು,ಫೆಬ್ರವರಿ,11,2025 (www.justkannada.in): ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಅವರ ವಿವಾಹ ಫೆಬ್ರವರಿ 15ಮತ್ತು 16ರಂದು ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ನೆರವೇರಲಿದ್ದು ಅಭಿಮಾನಿಗಳು ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ.
ಈ ಕುರಿತು ಸ್ವತಃ ನಟ ಡಾಲಿ ಧನಂಜಯ್ ಅವರು ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮದುವೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಎಲ್ಲವು ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ. ಮದುವೆಯಲ್ಲಿ ಪಾಲ್ಗೊಳ್ಳಲು ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ. ಎಲ್ಲರು ನೇರವಾಗಿ ಬಂದು ನನಗೆ ಆಶೀರ್ವಾದ ಮಾಡಿ ಹೋಗಬಹುದು. ವಿದ್ಯಾಪತಿ ದ್ವಾರ ಮೂಲಕ ಅಭಿಮಾನಿಗಳಿಗೆ ಎಂಟ್ರಿ ಇರುತ್ತದೆ ಎಂದು ತಿಳಿಸಿದರು.
ಚಿತ್ರರಂಗ, ರಾಜಕೀಯ ನಾಯಕರು ಎಲ್ಲರನ್ನ ಮದುವೆಗೆ ಕರೆದಿದ್ದೇನೆ. ಎಲ್ಲರು ಬಂದು ಆಶೀರ್ವಾದ ಮಾಡಬೇಕು ಎಂಬುದು ನಮ್ಮ ಬಯಕೆ. ಅಹ್ವಾನ ನೀಡಿರುವವರು ಬರುತ್ತಾರೆ ಎಂಬ ನಿರೀಕ್ಷೆ ಇದೆ. ನನಗೆ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ರಿಜಿಸ್ಟರ್ ಮದುವೆ ಆಗುವ ಆಸೆ ಇತ್ತು. ನಮ್ಮ ಕುಟುಂಬ ಸದಸ್ಯರು, ಚಿತ್ರರಂಗ, ಸ್ನೇಹಿತರು ಎಲ್ಲರಿಗೂ ಊಟ ಹಾಕಿಸಬೇಕು. ಹೀಗಾಗಿ ಒಂದೇ ವೇದಿಕೆಯಲ್ಲಿ ಎಲ್ಲರಿಗೂ ಊಟ ಹಾಕಿ ಆಶೀರ್ವಾದ ಪಡೆಯೋಣ ಎಂಬ ಆಸೆಯಿಂದ ಇಲ್ಲಿ ಮದುವೆ ಆಗುತ್ತಿದ್ದೇನೆ ಎಂದು ಡಾಲಿ ಧನಂಜಯ್ ತಿಳಿಸಿದರು.
ಚಾಮುಂಡೇಶ್ವರಿ ದೇವಾಲಯ ಮಾದರಿಯಲ್ಲಿ ವೇದಿಕೆ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇದೆ. ಅಭಿಮಾನಿಗಳು, ವಿಐಪಿ ಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ಆದರೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರು ಮದುವೆಗೆ ಬನ್ನಿ ಹಾರೈಸಿ ಎಂದು ನಟ ಡಾಲಿ ಧನಂಜಯ ಮನವಿ ಮಾಡಿದರು.
ನಟ ದರ್ಶನ್ ನನ್ನ ಮದುವೆಗೆ ಬಂದ್ರೆ ನನಗೆ ಸಂತೋಷ
ನಟ ದರ್ಶನ್ ಗೆ ವಿವಾಹ ಆಮಂತ್ರಣ ಪತ್ರಿಕೆ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ನಟ ಡಾಲಿ ಧನಂಜಯ್, ನನ್ನ ಮದುವೆಗೆ ದರ್ಶನ್ ಅವರು ಬಂದ್ರೆ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನ ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ರವರನ್ನ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ರವರು ಸಿಗುತ್ತಿಲ್ಲ. ಖಂಡಿತವಾಗಿ ದರ್ಶನ್ ನನ್ನ ಮದುವೆಗೆ ಬಂದರೆ ನನಗೆ ಸಂತೋಷ ಎಂದು ಹೇಳಿದರು.
Key words: Actor, Dolly Dhananjay, wedding, Mysore