ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸದಿದ್ದಲ್ಲಿ ಉಗ್ರ ಹೋರಾಟ: ಕನ್ನಡ ಸೇನೆ ಎಚ್ಚರಿಕೆ

ಬೆಂಗಳೂರು,ಜೂನ್,19,2024 (www.justkannada.in): ಕನ್ನಡಿಗರ ಅಸ್ಮಿತೆಯಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಕೂಡಲೇ ರಾಜ್ಯ ಸರ್ಕಾರ ಜಾರಿಗೊಳಿಸಬೇಕು,ಇಲ್ಲದಿದ್ದಲ್ಲಿ ಗೋಕಾಕ್ ಚಳವಳಿ ರೀತಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ. ಆರ್. ಕುಮಾರ್ ಎಚ್ಚರಿಸಿದ್ದಾರೆ.

ತುಮಕೂರು ರಸ್ತೆಯ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಆಯೋಜಿಸಿದ್ದ “ಕರ್ನಾಟಕದಲ್ಲಿ ಕನ್ನಡಿಗರಿಗೆ ಇಲ್ಲ ಉದ್ಯೋಗ” ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

1983ರಲ್ಲೇ ಡಾ.ಸರೋಜಿನಿ ಮಹಿಷಿ ವರದಿ ಮಂಡನೆಯಾದರೂ ಈವರೆಗೂ ವರದಿಯ ಸಂಪೂರ್ಣ ಅನುಷ್ಠಾನ ಆಗಿಲ್ಲ. ಪರಿಣಾಮ ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ರೈಲ್ವೆ, ಕೇಂದ್ರೀಯ ಕಾರ್ಖಾನೆ, ಸಾರ್ವಜನಿಕ ಆಸ್ಪತ್ರೆ ಸೇರಿ ಸರ್ಕಾರದ ಪ್ರತಿ ಇಲಾಖೆಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಇದಕ್ಕಾಗಿ ಸರ್ಕಾರ ದಿಟ್ಟ ಕ್ರಮ ಕೈಗೊಂಡು ಈ ಮಣ್ಣಿನ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು ಎಂದು ಕುಮಾರ್ ಒತ್ತಾಯಿಸಿದರು.

ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಅನ್ಯಭಾಷಿಕರೇ ಹೆಚ್ಚಾಗಿದ್ದು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದ ಅವರು,  ಹಾಗಾಗಿ ಕನ್ನಡಿಗರ ಹಿತ ಕಾಯುವ ವರದಿಯನ್ನು ಕೂಡಲೇ ಸರ್ಕಾರ ಜಾರಿಗೊಳಿಸಲೇಬೇಕೆಂಬುದು ಕನ್ನಡ ಸೇನೆಯ ಹಕ್ಕೊತ್ತಾಯವಾಗಿದೆ ಎಂದರು

ಒಂದೊಮ್ಮೆ ಸರ್ಕಾರ ವರದಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಗೋಕಾಕ್ ಮಾದರಿಯ ಉಗ್ರ ಚಳವಳಿ ಮಾಡಬೇಕಾಗುತ್ತದೆ  ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು ಎಂದು ಕನ್ನಡ ಸೇನೆ ಅಧ್ಯಕ್ಷ ಕುಮಾರ್ ಎಚ್ಚರಿಕೆ ನೀಡಿದರು.

ಕೆಲವು ಸಂಘಟನೆಗಳು ಹಾದಿ ತಪ್ಪಿವೆ ಎಂದ ಕುಮಾರ್,  ಕನ್ನಡದ ಶಾಲುಗಳನ್ನು ಹಾಕಿಕೊಂಡು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಡಾ.ಚಿಕ್ಕಹೆಜ್ಜಾಜಿ ಮಹದೇವ್ ಅವರು ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. ವಿಚಾರ ಸಂಕಿರಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಗೋವಾ ರಾಜ್ಯದಿಂದ ಕನ್ನಡ ಸೇನೆ ಪದಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಸೇನೆಯ ಪದಾಧಿಕಾರಿಗಳಾದ ಮುನಿಕೃಷ್ಣ ತಿಮ್ಮಪ್ಪ, ಸೋಮಶೇಖರ,  ಸಂತೋಷ್, ಶ್ರೀನಿವಾಸ್ ರಾಜೇಂದ್ರ ಕೊಣ್ಣೂರ , ಮಹಾಂತೇಶ್ ಚಿದಾನಂದ್ ಕೃಷ್ಣಮೂರ್ತಿ, ಸಿಎನ್ ಆರ್ ಕಂಪೆನಿ ರಾಮಸ್ವಾಮಿ, ಪಿಎಲ್ ಡಿ ಬ್ಯಾಂಕ್ ನ ತಿಮ್ಮರಸಯ್ಯ, ಹ್ಯೂಮನ್ ರೈಟ್ಸ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ ಚಿಕ್ಕಣ್ಣ ಮೊದಲಾದವರು ಉಪಸ್ಥಿತರಿದ್ದರು.

Key words: Dr. Sarojini Mahishi- report – implement- Kannada sene