ಮುಡಾದಲ್ಲಿ ಜಿಟಿಡಿ ಅಕ್ರಮವಿರಬಹುದು: ಕಳ್ಳರು ಒಂದಾಗಿದ್ದಾರೆ-  ಸ್ನೇಹಮಯಿ ಕೃಷ್ಣ ಆರೋಪ

ಮೈಸೂರು, ಅಕ್ಟೋಬರ್,4,2024 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿಲ್ಲ ಎಂಬ ಶಾಸಕ ಜಿಟಿ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ಕಳ್ಳರು ಕಳ್ಳರು ಒಂದಾಗಿದ್ದಾರೆ. ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಜಿಟಿ ದೇವೇಗೌಡರು 3 ತಿಂಗಳಿನಿಂದ ಏನು ಮಾಡುತ್ತಿದ್ದರು. ದಸರಾದಂತಹ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಜಿಟಿ ದೇವೇಗೌಡರ ಅಕ್ರಮವಿರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಸೆಲ್ ಡೀಡ್ ಮೂಲಕ ಮುಡಾದಲ್ಲಿ ಅಕ್ರಮ ಆಗಿದೆ. ಆ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಹೆಚ್.ಸಿ ಮಹದೇವಪ್ಪ ಸಹೋದರ ಮಗನಿಗೆ ಸೈಟು ಕೊಡಲಾಗಿದೆ ಎಂಬ ಮಾಹಿತಿ ಇದೆ . ಮರಿಗೌಡ ಸಹೋದರನಿಗೂ ಶಿವಣ್ಣನಿಗೂ ಸೇಲ್ ಡೀಡ್ ಮೂಲಕ ಸೈಟು ಕೊಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಇಂದು ವಿಜಯನಗರದ ಸೈಟ್ ಗಳ ಸ್ಥಳ ಮಹಜರು

ಮುಡಾ 50:50 ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಜಯನಗರದ ಸೈಟ್ ಗಳ ಸ್ಥಳ ಮಹಜರು ನಡೆಯಲಿದೆ. 2 ದಿನಗಳ ಹಿಂದೆ ಕೆಸರೆ ಗ್ರಾಮದಲ್ಲಿ ಸ್ಥಳ ಮಹಜರು ಮಾಡಲಾಗಿತ್ತು.

ಸ್ನೇಹಮಯಿ ಕೃಷ್ಣ ಅವರು ಇಂದು ಮತ್ತೆ ಲೋಕಾಯುಕ್ತ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದಿನಿಂದ 14 ಸೈಟ್‌ಗಳ ಸ್ಥಳ ಮಹಜರ್ ಪ್ರಕ್ರಿಯೆ ಆರಂಭವಾಗಲಿದ್ದು. ದೂರುದಾರ ಸ್ನೇಹಮಯಿ ಸಮ್ಮುಖದಲ್ಲಿ ಲೋಕಾಯುಕ್ತ ಪೊಲೀಸರು ಸೈಟ್‌ ಗಳ ಮಹಜರ್ ಕಾರ್ಯ ನಡೆಸಲಿದ್ದಾರೆ. ನಿನ್ನೆ ಇಡಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣ ವಿಚಾರಣೆಗೆ ತೆರಳಿದ್ದರು.

ಸಿಎಂ ಪತ್ನಿ ಪಾರ್ವತಿ ಅವರು ಈಗಾಗಲೇ ಸೈಟು ವಾಪಸ್ ನೀಡಿದ್ದು, ಪಾರ್ವತಿ ಹೆಸರಿನಿಂದ ಮುಡಾ ಕಾರ್ಯದರ್ಶಿ ಹೆಸರಿಗೆ ಸೈಟುಗಳು ವರ್ಗಾವಣೆಗೊಂಡಿವೆ.

Key words: GT Devegowda, CM Siddaramaiah, Muda case, Snehamai Krishna