ಗೃಹ ಸಚಿವ ಪರಮೇಶ್ವರ್ ನಾಡು ಕಂಡ ಪ್ರತಿಭಾವಂತ, ಅತ್ಯುತ್ತಮ ಆಡಳಿತಗಾರ- ಎಚ್.ಎ. ವೆಂಕಟೇಶ್

ಮೈಸೂರು,ಆಗಸ್ಟ್,6,2024 (www.justkannada.in): ಗೃಹಸಚಿವ ಡಾ. ಜಿ. ಪರಮೇಶ್ವರ್ ನಾಡು ಕಂಡಂತಹ ಪ್ರತಿಭಾವಂತ ಹಾಗೂ ಅತ್ಯುತ್ತಮ ಆಡಳಿತಗಾರರಾಗಿ, ಶೋಷಿತ ಸಮುದಾಯದಿಂದ ಬಂದರೂ ಸಹ ಎಲ್ಲಾ ಜಾತಿ ಸಮುದಾಯದ, ಎಲ್ಲಾ ಧರ್ಮಗಳ, ಎಲ್ಲಾ ಮಾದರಿಯ ಸಂಸ್ಕೃತಿಯನ್ನು ಗೌರವಿಸುವಂತಹ ವಿಶಾಲ ಮನಸ್ಥಿತಿಯ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ ಎಂದು ಕೆ.ಪಿ.ಸಿ.ಸಿ ವಕ್ತಾರ ಎಚ್.ಎ. ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.

ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಅಭಿಮಾನಿಗಳ ಯುವ ಸೈನ್ಯ, ಮೈಸೂರು ಜಿಲ್ಲಾ ಘಟಕದ ವತಿಯಿಂದ ಪರಮೇಶ್ವರ್ ರವರ ಜನ್ಮ ದಿನದ ಅಂಗವಾಗಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಮಾತನಾಡಿದರು.

ಆಡಳಿತ ಹೇಗೆ ನಡೆಸಬೇಕು ಎನ್ನುವುದರಲ್ಲಿ ಡಾ. ಪರಮೇಶ್ವರ್ ಮಾದರಿ, ರಾಜ್ಯ ಸಚಿವ ಸಂಪುಟದ ಹಲವಾರು ಇಲಾಖೆಗಳ ಜವಾಬ್ದಾರಿ ನಿರ್ವಹಿಸಿ ಎಲ್ಲಾ ಇಲಾಖೆಗಳಲ್ಲಿಯೂ ಕೂಡ ಅವರ ಅಮೂಲಾಗ್ರ ಬದಲಾವಣೆ ತಂದು ಅಭಿವೃದ್ಧಿಗೆ ಹೊಸ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ. ಈಗಲೂ ಕೂಡದೇ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಅವರ ಆಡಳಿತದಲ್ಲಿ ಸಮಾಜದ ಕಟ್ಟಕಡೆಯ ಶೋಷಿತರು ಇನ್ನಿತರ ನಿರ್ಲಕ್ಷಿತ ಸಮುದಾಯದವರು ಭದ್ರತೆಯ ಭರವಸೆಯನ್ನು ಹೊಂದಿದ್ದಾರೆ.

ಕೃಷಿ ವಿಜ್ಞಾನಿಯಾದರೂ ಕೂಡ ಸಮಾಜ ವಿಜ್ಞಾನಿಯಂತೆ ಅವರು ಹಮ್ಮಿಕೊಳ್ಳುವ ಕಾರ್ಯಗಳು ಮತ್ತು ನೀಡಿರುವ ಆಡಳಿತ ಎಲ್ಲರನ್ನೂ ಒಳಗೊಂಡಿರುತ್ತದೆ. ಈ ಹಿನ್ನಲೆಯಲ್ಲಿ ಇಂತಹವರ ಸೇವೆ ಸರ್ಕಾರ ಮತ್ತು ಸಮಾಜಕ್ಕೆ ಹಲವು ದಶಕಗಳ ಕಾಲ ನಿರಂತರವಾಗಿ ಸಿಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ ರಾಜ್ಯದ ಸಜ್ಜನ, ಪ್ರಾಮಾಣಿಕ ರಾಜಕಾರಣಿಗಳಲ್ಲಿ ಪರಮೇಶ್ವರ್ ಕೂಡ ಒಬ್ಬರು.  ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ನೀಡುವ ಮನೋಭಾವನೆ ಹೊಂದಿದ್ದಾರೆ.

ಅಭಿಮಾನಿ ಸಂಘದ ಅಧ್ಯಕ್ಷ ಸಿ. ಮಂಜುನಾಥ್, ಎಂ. ಮಣಿಕಂಠ, ಜ್ಞಾನೇಶ್, ಪ್ರಕಾಶ್, ನಿಂಗು, ಮಹೇಂದ್ರ, ರೇವಣ್ಣ, ಕೋಟೆ ಮಂಜು, ಸುಕುಮಾರ್, ನೇರಳೆ ಮಂಜು, ಮಧು ಸಿಂಗಾರಿಪುರ, ಹರೀಶ್, ಲೋಕೇಶ್ ಮುಂತಾದವರು ಹಾಜರಿದ್ದರು.

ಬಿಜೆಪಿಯವರಿಗೆ ಪಾದಯಾತ್ರೆ ಮಾಡುವ ನೈತಿಕತೆ ಇಲ್ಲ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಕಿಡಿಕಾರಿದ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್,  ಬಿಜೆಪಿಯವರಿಗೆ ಪಾದಯಾತ್ರೆ ಮಾಡುವ ನೈತಿಕತೆ ಇಲ್ಲ. ಇವರು ಮಾಡುತ್ತಿರುವ ಪಾದಯಾತ್ರೆ ವಿಜಯೇಂದ್ರ, ಅಶೋಕ್ ಅವರ ಪ್ರಾಯೋಕತ್ವದ ಪಾದಯಾತ್ರೆ. ಭ್ರಷ್ಟಾಚಾರದ ಪಿತಾಮಹರೆಂದರೆ ಬಿಎಸ್ ವೈ  ಹಾಗೂ ವಿಜಯೇಂದ್ರ. ಇವರು ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಾರೆ. ಆ ಪಾದಯಾತ್ರೆಯಲ್ಲಿ ಎಲ್ಲಿಂದಲೋ ಜನರನ್ನ ಕರೆತಂದು ಪಾದಯಾತ್ರೆ ಅಂತ ಮಾಡುತ್ತಿದ್ದಾರೆ. ನಿಜವಾಗಿಯೂ ಇವರಿಗೆ ನಾಚಿಕೆಯಾಗಬೇಕು. ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Key words: Home Minister, G. Parameshwar, Birthday, H.A. Venkatesh