ಕನ್ನಡ ಚಲನಚಿತ್ರ ಚುಕ್ಕಣಿ ಇಲ್ಲದ ಹಡಗಾಗಿದೆ- ಬೇಸರ ಹೊರಹಾಕಿದ ಸಂಗೀತ ನಿರ್ದೇಶಕ ಹಂಸಲೇಖ.

ಮೈಸೂರು,ಸೆಪ್ಟಂಬರ್,12,2023(www.justkannada.in): ಕನ್ನಡ ಚಲನಚಿತ್ರ ಚುಕ್ಕಣಿ ಇಲ್ಲದ ಹಡಗಾಗಿದೆ ಎನ್ನುವ ಮೂಲಕ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ಬೇಸರ ಹೊರಹಾಕಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ,  ಕನ್ನಡ ಚಲನಚಿತ್ರ ಚುಕ್ಕಣಿ ಇಲ್ಲದ ಹಡಗಾಗಿದೆ. ದೊಡ್ಡ ದೊಡ್ಡ ಮಹಾನಿಯರು ಸಂಸ್ಥೆಯನ್ನ ಕಟ್ಟಿದರು. ಮೂರು ವರ್ಗಗಳನ್ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ವಲಯವನ್ನ ಒಗ್ಗಟ್ಟಿನ ತ್ರಿಶೂಲವಾಗಿಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ಇವತ್ತು ಪ್ಯಾನ್ ಇಂಡಿಯಾದ ವ್ಯಾಪಾರದ ಸೋಗು ಬಂದಿದೆ. ಕನ್ನಡ ಚಿತ್ರರಂಗ ದಿಕ್ಕು ತಪ್ಪಿ ಹೋಗಿದೆ. ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನಟ್ಟಿಕೊಂಡು ಎಲ್ಲರ ಜೊತೆಯಲ್ಲಿ‌ ಬದುಕಬೇಕಾ ಎನ್ನುವ ದೊಡ್ಡ ತಾಪತ್ರೆಯ ಬಂದಿದೆ ಎಂದು ಅಸಮಾಧಾನ  ಹೊರ ಹಾಕಿದರು.

ಈ ಹಿಂದೆ ಒಬ್ಬ ಹಿರೋ ಪ್ರತಿ ಕನ್ನಡ ಚಿತ್ರದಲ್ಲಿ ಕನ್ನಡದ ಹಾಡು ಇರುತ್ತಿತ್ತು. ಈಗ ಕನ್ನಡದ ಬಗ್ಗೆ ಹಾಡು ಹೇಳಲು ಹೆದರುತ್ತಿದ್ದಾರೆ. ಏಕಂದರೇ ಇಲ್ಲಿ ಹಾಡಿದ ಹಾಡು ಅಲ್ಲಿ ಸಲ್ಲುವುದಿಲ್ಲ. ಅಲ್ಲಿ ಹಾಡಿದ ಹಾಡು ಇಲ್ಲಿ ಸಲ್ಲುವುದಿಲ್ಲ. ಹೀಗಾಗಿ ಬರಿ ಆಕ್ಷನ್ ನೇ ರಿಯಾಕ್ಷನ್ ಆಗಿದೆ. ಸಿನಿಮಾಗಳಲ್ಲಿ ಸಂಬಂಧಗಳು ಯಾವುದು ಇರುವುದಿಲ್ಲ. ಬರಿ ಹೊಡಿ ಬಡಿ,  ಕಿವಿ ಮುಚ್ಚು ರೀತಿ ಸಂಗೀತ ಇದು ಎಲ್ಲಾ ಭಾಷೆಗಳಲ್ಲಿ ಮ್ಯಾಚ್ ಆಗುತ್ತೆ ಅಂಥ ತಿಳಿದುಕೊಂಡಿದ್ದಾರೆ ಎಂದು ಹಂಸಲೇಖ ಹೇಳಿದರು.

ಕನ್ನಡದಲ್ಲಿ ಹೊಸ ನಿರ್ದೇಶಕರು 250 ಜನ ಇದ್ದಾರೆ, ಹೊಸ ನಿರ್ಮಾಪಕರು 500 ಜನ ಇದ್ದಾರೆ. ಇವರ್ಯಾರಿಗೆ ನಮ್ಮ ಚೇಂಬರ್ ನ ಸಂಪರ್ಕವೇ ಇಲ್ಲ. ಎಲ್ಲರನ್ನ ಕರೆದು ಚರ್ಚೆ ಮಾಡುವವರೇ ಇಲ್ಲದಂತಾಗಿದೆ. ಮುಂದಿನ ದಿನದಿನದಲ್ಲಿ ಯಾರಾದರೂ ಬಂದು ಆ ಚುಕ್ಕಾಣಿಯನ್ನ ಹಿಡಿಯಬೇಕು. ಸಂಸ್ಕೃತಿ ಮಾರ್ಗದಲ್ಲಿ, ಕನ್ನಡ ಮಾರ್ಗದಲ್ಲಿ ಕನ್ನಡ ಚಲನಚಿತ್ರವನ್ನ ನಡೆಸುವಂತಾಗಬೇಕು ಎಂದು ಹಂಸಲೇಖ ಹೇಳಿದರು.

Key words: Kannada cinema – ship -without – rudder- music director –Hamsalekha-mysore