ಹೆಚ್ ಡಿಕೆ ವಿರುದ್ದ ಭೂ ಒತ್ತುವರಿ ಆರೋಪ: ಬಿಜೆಪಿ ಯಾಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ- ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು,ಮಾರ್ಚ್,20,2025 (www.justkannada.in): ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಕುಟುಂಬ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ. ಆದರೆ ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರ ಶಕ್ತಿ ಕುಂದಿಸುವ ಕೆಲಸ ಮಾಡಿದ ಬಿಜೆಪಿಯವರು ಹೆಚ್ ಡಿಕೆ ಅವರ ಭೂ ಒತ್ತುವರಿ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಬಿಡದಿಯ ಕೇತುಗಾನಹಳ್ಳಿ ಸರ್ಕಾರಿ ಜಮೀನು ಒತ್ತುವರಿ ವಿಚಾರ ಕುರಿತು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಸಿಎಂ ಪತ್ನಿಗೆ  ಮುಡಾ ಕೊಟ್ಟಿರುವ 14 ನಿವೇಶನಗಳ ವಿಚಾರವಾಗಿ ದೊಡ್ಡ ಆಂದೋಲನವನ್ನು ಬಿಜೆಪಿಯವರು ಮಾಡಿದರು. ಈಗ ಎಚ್‌ ಡಿ ಕುಮಾರಸ್ವಾಮಿ ಅವರ ಕುಟುಂಬ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ. 2002 ರಲ್ಲಿ ಸಂಪತ್ತು ಎಂಬ ವ್ಯಕ್ತಿ ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ವರದಿ ಪ್ರಕಾರ 8.30 ಗುಂಟೆ ಒತ್ತುವರಿ ಆಗಿದೆ ಎಂದು ಲೋಕಾಯುಕ್ತಾ ವರದಿಯಲ್ಲಿ ಉಲ್ಲೇಖವಿದೆ. 2009 ರಲ್ಲಿ ತನಿಖಾ ವತದಿ ಮುಕ್ತಾಯವಾಗುತ್ತದೆ. ಆದರೂ ಒತ್ತುವರಿ ಜಾಗವನ್ನ ವಾಪಸ್ ತೆಗೆದುಕೊಳ್ಳುವ ಕೆಲಸವನ್ನ ಅಂದಿನ ಬಿಜೆಪಿ ಸರ್ಕಾರ ಮಾಡೋದಿಲ್ಲ. 2011 ರಲ್ಲಿ ಸಂಪತ್ತು ಮತ್ತೊಮ್ಮೆ ದೂರು ಸಲ್ಲಿಸುತ್ತಾರೆ. 2014 ರಲ್ಲಿ ಕಂದಾಯ ಇಲಾಖೆಗೆ ಲೋಕಾಯುಕ್ತಾ ಸೂಚನೆ ನೀಡುತ್ತದೆ. ಎಸ್.ಆರ್ ಹೀರೇಮಠ್ ಅವರು ಹೈಕೋರ್ಟ್ ನಲ್ಲಿ ಕಾನೂನು ಹೋರಾಟಕ್ಕೆ ಇಳಿಯುತ್ತಾರೆ. 2020 ರಂದು ಸಮಾಜ ಪರಿವರ್ತನಾ ಸಮುದಾಯ  ಉಚ್ಚ ನ್ಯಾಯಾಲಯದಲ್ಲಿ ಕಂಟೆಪ್ಟ್ ಮೂವ್ ಮಾಡುತ್ತಾರೆ. ಸುಮಾರು 200 ಎಕರೆ ಭೂಮಿಯನ್ನ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ವರದಿ ಹೇಳುತ್ತದೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

ಎಚ್ ಡಿ ಕುಮಾರ್ ಸ್ವಾಮಿ ಅವರಿಗೆ ನಾನು ಒಂದು ಪ್ರಶ್ನೆ ಕೇಳುತ್ತೇನೆ. 2004, 2006, 2008, 09 ರಲ್ಲಿ ನೀವೇ ಸರ್ಕಾರದ ಭಾಗವಾಗಿದ್ದೀರಿ. ಯಾವ ಜಮೀನಿನನ್ನೂ ಒತ್ತುವರಿ ಮಾಡಿಕೊಂಡಿಲ್ಲ ಎನ್ನುವುದಕ್ಕೆ ಒಂದು ದಾಖಲೆ ತೋರಿಸಿ. ಬಿಜೆಪಿಯವರಿಗೆ ಏನಾದರೂ ಮಾನ ಮರ್ಯಾದೆ ಇದ್ರೆ ಈ ವಿಚಾರ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಸಿಎಂ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರ ಶಕ್ತಿ ಕುಂದಿಸುವ ಕೆಲಸ ಮಾಡಿದಿರಿ. ಇದರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.

ನೀವು ಏನು ತಿಪ್ಪರಲಾಗ ಹಾಕಿದ್ರು 4% ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ.

ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಅಲ್ಪಸಂಖ್ಯಾತರು ಅಂದ್ರೆ ಕೇವಲ ಮುಸ್ಲಿಮರಲ್ಲ. ಕ್ರಿಶ್ಚಿಯನ್, ಸಿಖ್, ಜೈನರು ಸೇರಿದಂತೆ 7 ಸಮುದಾಯಗಳ ಬರುತ್ತದೆ. ಒಟ್ಟು 43% ಮೀಸಲಾತಿಯನ್ನ ಗುತ್ತಿಗೆಯಲ್ಲಿ ಕೊಡಲಾಗಿದೆ. ಅದರಲ್ಲಿ ಎಸ್ಸಿ, ಎಸ್ಟಿ, ಒಬಿಸಿ ,ಮೈನಾರಿಟೀಸ್ ಸೇರಿದೆ. ಮುಸ್ಲಿಮರು ಈ‌ ದೇಶದವರಲ್ವಾ.? ಎಸ್ಸಿ, ಎಸ್ಟಿ,ಮತ್ತು ಒಬಿಸಿಗೆ ಕೊಟ್ಟಿರುವ 43% ಅನ್ನು ರದ್ದು ಮಾಡಿಸುವ ಹುನ್ನಾರ ಮಾಡುತ್ತಿದ್ದಾರೆ. ಮೇಲ್ವರ್ಗದವರಿಗೂ 10% ಮೀಸಲಾತಿ ಕೊಟ್ಟಿಲ್ವಾ.? ಅದಕ್ಕೇ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದ್ರಾ.? ಮುಸ್ಲಿಮರನ್ನ ಯಾವುದಕ್ಕೂ ಪರಿಗಣಿಸೋದೆ ಬೇಕಿಲ್ವಾ.? ನೀವು ಏನು ತಿಪ್ಪರಲಾಗ ಹಾಕಿದ್ರು 4% ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ ಎಂದು ಸವಾಲೆಸೆದರು.

ಮಾರ್ಚ್ 22ರ ಕರ್ನಾಟಕದ ಬಂದ್ ಮುಂದೂಡುವಂತೆ ವಾಟಾಳ್ ನಾಗರಾಜ್ ಗೆ ಮನವಿ ಮಾಡಿದ ಎಂ.ಲಕ್ಷ್ಮಣ್,  ಈಗ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ತೊಂದರೆ ಆಗೋದು ಬೇಡ‌. ಇನ್ನೊಂದು ದಿನ ಇಟ್ಟುಕೊಳ್ಳಿ ಅದಕ್ಕೆ ನಮ್ಮ ಬೆಂಬಲ ಕೂಡ ಇದೆ ಎಂದರು.

Key words: Land encroachment, against, HDK, M. Laxman, Mysore