BJP, RSS ಅಣತಿಯಂತೆ ಇಡಿ ಕೆಲಸ: ಸ್ನೇಹಮಯಿ ಕೃಷ್ಣ ಬಂಧಿಸದಿದ್ರೆ ಆಹೋರಾತ್ರಿ ಪ್ರತಿಭಟನೆ- ಎಂ.ಲಕ್ಷ್ಮಣ್

ಮೈಸೂರು,ಜನವರಿ,31,2025 (www.justkannada.in): ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣಗೆ ನ್ಯಾಯಾಲಯ ಶಿಕ್ಷೆ ನೀಡಿದೆ. ಸ್ನೇಹಮಯಿ ಕೃಷ್ಣರನ್ನ ಬಂಧಿಸದಿದ್ದರೇ ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಕೆಲವು ಸತ್ಯಾಸತ್ಯತೆಗಳನ್ನ ಜನರಿಗೆ ತಿಳಿಸಬೇಕಿದೆ. ನಿನ್ನೆ ಇಡಿ ಇಲಾಖೆ 104 ಪುಟದ ವರದಿಯನ್ನ ಎಡಿಜಿಪಿ ಲೋಕಾಯುಕ್ತಗೆ ನೀಡಲಾಗಿದೆ. ಈ ರಿಪೋರ್ಟ್ ಅನ್ನು ಕೆಲವೇ ಕೆಲವು ಮಾಧ್ಯಮಕ್ಕೆ ನೀಡಲಾಗಿದೆ. ಇಡಿ ಇಲಾಖೆ ಸುಳ್ಳು ವರದಿಯನ್ನ ನೀಡಿದೆ. ಇಡಿಯು ಬಿಜೆಪಿ, ಆರ್ ಎಸ್ಎಸ್ ಅಣತಿಯಂತೆ ಕೆಲಸ ಮಾಡುತ್ತಿದೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು,  ಹೀಗಾಗಿ ಮುಡಾ ವಿಚಾರದಲ್ಲಿ ಸಿಎಂ ಪತ್ನಿ ಪಡೆದಿರುವ ಸೈಟ್ ಗಳ ಬಗ್ಗೆ ತನಿಖೆ ಮಾಡಲು ಲೋಕಾಯುಕ್ತಗೆ ನ್ಯಾಯಾಲಯ  ನೀಡಿದೆ. ಪ್ರಕರಣ ಸಂಬಂಧ ಈಗಾಗಲೇ ಲೋಕಾಯುಕ್ತ ಕೂಡ ಕೋರ್ಟ್ ಗೆ ವರದಿ ಸಲ್ಲಿಸಿದ್ದು, ತನಿಖಾ ಸಂಸ್ಥೆ ತನಿಖೆ ಮಾಡುವ ವೇಳೆ ಇಡಿ ಮಧ್ಯಸ್ತಿಕೆ ವಹಿಸಿದೆ. ಮನಿ ಲಾಂಡರಿಂಗ್  ಆಗಿದ್ದರೆ ಇಡಿ ತನಿಖೆ ಮಾಡಬೇಕು. ಇಡಿಗೆ ತನಿಖೆ ಮಾಡುವಂತೆ ಯಾರು ಮನವಿ ಮಾಡಿಲ್ಲ. ಸ್ನೇಹಮಯಿ ಕೃಷ್ಣ ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದೆ. ಇದರಲ್ಲೇ ಗೊತ್ತಾಗುತ್ತದೆ ಇಡಿ ಅಧಿಕಾರಿಗಳು ಲೋಕಾಯುಕ್ತ ಮೇಲೆ ಪ್ರಭಾವ ಬೀರಲು ಮುಂದಾಗಿದ್ದಾರೆ ಎಂದು. ಈ ಮೂಲಕ ಜನಸಾಮಾನ್ಯರಿಗೆ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂದು ಬಿಂಬಿಸುವ ಕೆಲಸ ಇಡಿ ಮಾಡುತ್ತಿದೆ. 1095 ನಿವೇಶನ ಅಕ್ರಮ ಆಗಿರುವುದರ ಬಗ್ಗೆ ದಾಖಲೆ ನೀಡಿದ್ದೀರಾ. ಇದನ್ನ ನಾವು ಸ್ವಾಗತ ಮಾಡುತ್ತೇವೆ. ಸಿಎಂ ಪತ್ನಿ ಮತ್ತು ಸಿದ್ದರಾಮಯ್ಯನವರು ಮನಿ ಲಾಂಡರಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ ಎಲ್ಲಾದರೂ ದಾಖಲೆ ನೀಡಿದ್ದೀರಾ ಎಂದು ಇಡಿ ಅಧಿಕಾರಿಗಳಿಗೆ ಪ್ರಶ್ನಿಸಿದರು.

1997ರಲ್ಲಿ ಡಿನೋಟಿಫೈ ಆಗಿದ್ದು ಆ ವೇಳೆ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಹೀಗಾಗಿ ನೀವು ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂದು ಹೇಳಿದ್ದಿರಾ. ಡಿನೋಟಿಫೈ ವೇಳೆ ತಪ್ಪಾಗಿದ್ರೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಇಡಿ ಹಸಿ ಸುಳ್ಳು ಹೇಳುತ್ತಿದೆ. 2004ರ ಚಿತ್ರವನ್ನ ಸ್ಯಾಟ ಲೈಟ್ ನಲ್ಲಿ ನೋಡಿದ್ದೀರಾ. ಅದನ್ನು ನೋಡಲು ಸಾಧ್ಯ ಇದೆಯಾ. 2004ರಲ್ಲಿ ಡೆವಲಪ್ಮೆಂಟ್ ಆಗಿತ್ತು ಎಂದು ಹೇಳುತ್ತಿದ್ದೀರಾ. 1997 ರಲ್ಲಿ ಡಿನೋಟಿಫೈ ಆಗಿರೋದು ಮುಡಾಗೆ ಸೇರಲು ಹೇಗೆ ಸಾಧ್ಯ. ನಾವು ಈ ಸೈಟ್ ಗೆ 56 ಕೋಟಿ ಕೊಡಿ ಎಂದು ಎಲ್ಲಾದರೂ ಕೇಳಿದ್ದೀವಾ? ಸಿಎಂ ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಡಿ ಈ ರೀತಿ ತನಿಖೆಯ ಹಾದಿ ತಪ್ಪಿಸುತ್ತಿದೆ. ಸಿಬಿಐಗೆ ಪ್ರಕರಣ ನೀಡುವ ನಿರ್ಧಾರಕ್ಕೆ ನ್ಯಾಯಾಲಯ ಬರಲಿ ಎಂಬ ಉದ್ದೇಶ ಇದರಲ್ಲಿದೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

ಜಮೀನನ್ನು ವಶಪಡಿಸಿಕೊಳ್ಳಲಾಗಿದ್ದು, ಪರಿಹಾರ ರೂಪದಲ್ಲಿ 14 ಸೈಟ್ ಕೊಡಲಾಗಿದೆ. ಆ 14 ನಿವೇಶನಗಳನ್ನ ವಾಪಾಸ್ ಪಡೆಯಲಾಗಿದೆ. ಹೀಗಿದ್ರೆ ನಮ್ಮ ಜಮೀನು ನಮಗೆ ವಾಪಾಸ್ ಕೊಡಿ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.

ಇಡಿಗೆ ಈಗ ಸ್ನೇಹಮಯಿ ಕೃಷ್ಣ ಬಾಸ್

ಜಯರಾಮ್ ಕಂಪನಿಯಲ್ಲಿ ಅಕ್ರಮ ಆಗಿದೆ ಎಂದು ಹೇಳಿದ್ದಿರಾ. ತೆಂಗಿನಕಾಯಿ, ತೆಂಗಿನಕಾಯಿ ಎಣ್ಣೆ, ಅಡಿಕೆ, ಅಡಿಕೆ ಎಣ್ಣೆ ಎಂಬ ಕೋಡ್ ವರ್ಡ್ ಬಳಸಲಾಗಿದೆ ಎಂದಿದ್ದೀರಾ. ಹಣ ಪಡೆಯುವಾಗ ಕೋಡ್ ವರ್ಡ್ ಮೂಲಕ ಪಡೆಯಲಾಗಿದೆ ಎಂದು ನಮೂದು ಮಾಡಿದ್ದೀರಾ. ನಿವೇಶನ ಅಕ್ರಮ ಆಗಿರೋದು ಬಿಜೆಪಿ, ಜೆಡಿಎಸ್ ಕಾಲದಲ್ಲಿ. ಸಿದ್ದರಾಮಯ್ಯ, ಸರ್ಕಾರ ಒಪ್ಪಿಗೆ ಕೊಡಲಿ ಬಿಡಲಿ. ಇಡಿ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತದೆ. ವೈಟ್ನರ್ ಹಾಕಿರೋದನ್ನ ಕೂಡ ತಪ್ಪಾಗಿದೆ ಎಂದು ಬಿಂಬಿಸಲು ಹೊರಟಿದ್ದೀರಾ. ವೈಟ್ನರ್ ಹಾಕಿರೋದರಲ್ಲಿ ತಪ್ಪೇನಿದೆ. ಇಡಿಗೆ ಈಗ ಸ್ನೇಹಮಯಿ ಕೃಷ್ಣ ಬಾಸ್ ಆಗಿದ್ದಾರೆ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು

ಸ್ನೇಹಮಯಿ ಕೃಷ್ಣ ಮಾತಿಗೆ ಇಷ್ಟೊಂದು ಮನ್ನಣೆ ನೀಡಲಾಗುತ್ತಿದೆ. ಸ್ನೇಹಮಯಿ ಕೃಷ್ಣ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ನೀಡಿದೆ. ಇದನ್ನ ನಾವು ಹೇಳಿದ್ರೆ ನಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ. ಸ್ನೇಹಮಯಿ ಕೃಷ್ಣರನ್ನ ಪೊಲೀಸರು ಬಂಧಿಸಬೇಕು. ಸ್ನೇಹಮಯಿ ಕೃಷ್ಣ ವಿರುದ್ಧ ಸಾಫ್ಟ್ ಕಾರ್ನರ್ ಬೇಡ. ಸ್ನೇಹಮಯಿ ಕೃಷ್ಣ ಬಂಧಿಸುವಲ್ಲಿ ಪೊಲೀಸ್ ನವರು ಹಿಂದೇಟು ಹಾಕಿದರೆ ಕಮಿಷನರ್ ಕಚೇರಿ ಮುಂದೆ ಆಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಂ ಲಕ್ಷ್ಮಣ್ ಹೇಳಿದರು.

Key words: BJP, RSS, ED, Snehamayi Krishna, M. Laxman