ಬೈ ಎಲೆಕ್ಷನ್ ನಲ್ಲಿ ಮಾತನಾಡಲು ವಿಚಾರ ಬೇಕು ಅಂತ ಇಡಿ ಕಾರ್ಯಾಚರಣೆ- ಎಂ.ಲಕ್ಷ್ಮಣ್ ಆರೋಪ

ಮೈಸೂರು,ಅಕ್ಟೋಬರ್,18,2024 (www.justkannada.in): ಉಪ ಚುನಾವಣೆಯಲ್ಲಿ ಮಾತನಾಡಲು ವಿಚಾರ ಬೇಕು ಅಂತ ಇಡಿ ಕಾರ್ಯಾಚರಣೆ ಮಾಡಿಸಲಾಗುತ್ತಿದೆ. ಇಡಿ ಮುಡಾದಲ್ಲಿ ತನಿಖೆ ಮಾಡುವಂತದ್ದು ಏನೂ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಮುಡಾ ಮೇಲೆ ಇಡಿ ದಾಳಿ ಕುರಿತು ಮಾತನಾಡಿದ ಎಂ.ಲಕ್ಷ್ಮಣ್,  ಈಗಾಗಲೇ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ಆದರೂ ಇಡಿಯವರನ್ನ ಕೇಂದ್ರ ಬಳಸಿಕೊಂಡು ತನಿಖೆಗೆ ಕಳಿಸಿದೆ ನಮ್ಮ‌ನ್ನ ಹೆದರಿಸುವ ಕೆಲಸ ಮಾಡುತ್ತಿದೆ. ನಾವು ಇದಕ್ಕೆಲ್ಲ ಎದರುವುದಿಲ್ಲ. ಈಗಾಗಲೇ ಮೋದಿ ಹರಿಯಾಣ ಚುನಾವಣೆಯಲ್ಲಿ ಮುಡಾ ವಿಚಾರ ಪ್ರಸ್ತಾಪಿಸಿ ಸಿಎಂ ಅವ್ಯವಹಾರ ಮಾಡಿದ್ದಾರೆ ಎಂದು ಬಿಂಬಿಸಿದ್ರು. ಮುಂದೆ ಉಪ ಚುನಾವಣೆ, ಮುಂದೆ ಜಾರ್ಖಂಡ್,ಮಹಾರಾಷ್ಟ್ರ ಚುನಾವಣೆಯಲ್ಲೂ ಮುಡಾ ವಿಚಾರ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.

ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ನಾನು ಇಡಿ ಇಲಾಖೆಗೆ ದೂರು ನೀಡಿದ್ದೆ. ಯಾವ ರೀತಿ ದಾಖಲೆಗಳನ್ನ ನಕಲು ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದೆ. ಈ ವಿಚಾರವಾಗಿ ಇಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿರಬಹುದು. ಇಡಿ ಅಧಿಕಾರಿಗಳ ತನಿಖೆಗೆ ನಾವು ಅಡ್ಡಿಪಡಿಸಲ್ಲ. ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆ ಬರುತ್ತಿದೆ. ರಾಜ್ಯದಲ್ಲಿ ಬೈ ಎಲೆಕ್ಷನ್ ಕೂಡ ನಡೆಯುತ್ತಿದೆ. ಈ ವಿಚಾರವನ್ನ ಚುನಾವಣೆ ಸಮಯದಲ್ಲಿ ಮೋದಿ, ಅಮಿತ್ ಶಾ ಪ್ರಸ್ತಾಪ ಮಾಡುತ್ತಾರೆ. ಕರ್ನಾಟಕದಲ್ಲಿ ಸ್ವತಃ ಸಿಎಂ ಅವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಂಬಿಸಲು ಮುಂದಾಗಿದ್ದಾರೆ. ತನಿಖಾ ಸಂಸ್ಥೆಗಳನ್ನ ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮುಡಾಗೆ ಅಧ್ಯಕ್ಷರನ್ನಾಗಿ ಯಾರನ್ನೂ ನೇಮಕ ಮಾಡಬೇಡಿ. ಹಿರಿಯ ಐಎಎಸ್ ಅಧಿಕಾರಿಯನ್ನ ಆಡಳಿತಾಧಿಕಾರಿಯಾಗಿ ನೇಮಿಸಿ ಮುಡಾವನ್ನ ಸಂಪೂರ್ಣವಾಗಿ ತೊಳೆಯುವ ಕೆಲಸ ಮಾಡಬೇಕು. ನಾನೀಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೂ ಈ ವಿಚಾರವಾಗಿ ಮನವಿ ಮಾಡಿದ್ದೇ‌ನೆ. ಇನ್ನೂ ಎರಡು ಮೂರು ವರ್ಷಗಳ ಕಾಲ ಯಾರನ್ನೂ ಅಧ್ಯಕ್ಷರನ್ನಾಗಿ ನೇಮಿಸಬಾರದು ಎಂದರು.

ನನಗೂ ಮುಡಾ ಅಧ್ಯಕ್ಷ ಸ್ಥಾನ ಬೇಡ.

ಮುಡಾ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ನನಗೂ ಮುಡಾ ಅಧ್ಯಕ್ಷ ಸ್ಥಾನ ಬೇಡ. ನಿಗಮ ಮಂಡಳಿ ಸದಸ್ಯರ ನೇಮಕ ಪಟ್ಟಿ ರೆಡಿ ಇದೆ. ಇದರ ಜೊತೆ ಅಧ್ಯಕ್ಷರನ್ನ ಕೂಡ ನೇಮಕ ಮಾಡಲಾಗುತ್ತದೆ. ಸದ್ಯ ಮೂರ್ನಾಲ್ಕು ತಿಂಗಳ ಕಾಲ ಮುಡಾಗೆ ಅಧಿಕಾರೆತರನ್ನ ನೇಮಕ ಮಾಡೋದು. ಹಿರಿಯ ಅನುಭವಿ ಅಧಿಕಾರಿಯನ್ನ ಮುಡಾಗೆ ನೇಮಕ ಮಾಡಲಿ. ಈ ಬಗ್ಗೆ ಸಿಎಂ ಬಳಿ ನಾನು ಮನವಿ ಮಾಡಿದ್ದೇನೆ. ಬಿಡಿಎ ಮಾದರಿಯಲ್ಲೇ ಮುಡಾದಲ್ಲು ಅಧಿಕಾರೆತರ ಸದಸ್ಯರನ್ನ ನೇಮಕ ಮಾಡೋದು ಬೇಡ. ಮುಡಾ ಹಗರಣ ಸತ್ಯಾಸತ್ಯತೆ ಹೊರ ಬರಲಿ. ಆ ಬಳಿಕ ಅಧ್ಯಕ್ಷರ ನೇಮಕ ಆಗಲಿ ಎಂದರು.

ಹೆಚ್ ಡಿಕೆ ಆರೋಪಕ್ಕೆ ತಿರುಗೇಟು

ಕುಮಾರಸ್ವಾಮಿಯವರು 25 ವರ್ಷದ ಹಳೆಯ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಆ ಸೈಟ್ ನಲ್ಲಿ ಮನೆ ಕಟ್ಟಿ ಮನೆ ಮಾರಾಟ ಕೂಡ ಮಾಡಿದ್ದಾರೆ. ಆರ್ ಟಿಐ ಕಾರ್ಯಕರ್ತ ಗಂಗರಾಜು ಈ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಕೂಡ ಛೀಮಾರಿ ಹಾಕಿ ವಾಪಸ್ ಕಳುಹಿಸಿದೆ. ಈಗ ವಿಚಾರವನ್ನ ಕುಮಾರಸ್ವಾಮಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನ ನೀಡೋದು ಬಿಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್  ತಿರುಗೇಟು ನೀಡಿದರು.

Key words:  M. Laxman, ED raid, muda, by-elections