ಅರಣ್ಯ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೆಂಗಳೂರು, ಜೂನ್,20,2024 (www.justkannada.in):  ರಾಜ್ಯದ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಎಲ್ಲ ಅರಣ್ಯ ಪ್ರದೇಶವನ್ನು ಸಂಪೂರ್ಣ  ಪ್ಲಾಸ್ಟಿಕ್ ಮುಕ್ತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಡೆದ  ಹುಲಿ ಸಂರಕ್ಷಣಾ ಪ್ರತಿಷ್ಠಾನದ 15ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಡೀಪುರ, ನಾಗರಹೊಳೆ, ಕುಮಾರ ಪರ್ವತದ ಅರಣ್ಯ ಪ್ರದೇಶಕ್ಕೆ ಸಾಗುವ ರಸ್ತೆಗಳ ಬದಿಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್  ಕ್ಯಾರಿಬ್ಯಾಗ್, ನೀರಿನ ಬಾಟಲಿಗಳು ಬಿದ್ದಿರುವುದನ್ನು ತಾವೇ ಕಣ್ಣಾರೆ ಕಂಡಿರುವುದಾಗಿ ಸಭೆಗೆ ತಿಳಿಸಿದರು.

ಕಾಡಿನಿಂದ ಹೊರಬರುವ ವನ್ಯಜೀವಿಗಳ ಪ್ರಾಣಕ್ಕೆ ಈ ಪ್ಲಾಸ್ಟಿಕ್ ಕುತ್ತುತರುತ್ತದೆ. ಇತ್ತೀಚೆಗೆ ಮೃತಪಟ್ಟ ಮೊಸಳೆ ಹೊಟ್ಟೆಯಲ್ಲಿ, ಜಿಂಕೆಯ ಹೊಟ್ಟೆಯಲ್ಲಿ 3-4 ಕೆ.ಜಿ. ಪ್ಲಾಸ್ಟಿಕ್ ಇದ್ದ ಬಗ್ಗೆ ಮಾಧ್ಯಮದಲ್ಲಿ ಓದಿದ್ದೇನೆ. ಇದು ಆತಂಕಕಾರಿ ವಿಷಯವಾಗಿದ್ದು, ಅರಣ್ಯದೊಳಗಿನ ಮಾರ್ಗದಲ್ಲಿ ಸಾಗುವ ಎಲ್ಲ ವಾಹನಗಳನ್ನು ಎರಡು ಹಂತದಲ್ಲಿ ಕಟ್ಟು ನಿಟ್ಟಿನ ತಪಾಸಣೆಗೆ ಒಳಪಡಿಸಿ ಎಂದು ಸೂಚಿಸಿದರು.

ಮೊದಲ ಹಂತದಲ್ಲಿ ಸ್ವಯಂ ಪ್ರೇರಿತವಾಗಿ ಕಸದ ಬುಟ್ಟಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ತಿಳಿಸಿ, ಎರಡನೇ ಹಂತದಲ್ಲಿ ತಪಾಸಣೆ ಮಾಡಿ ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್ ತೆಗೆದುಕೊಂಡು ಬರುವವರಿಗೆ ದಂಡ ವಿಧಿಸಿ ಎಂದು ಸೂಚಿಸಿದರು.

ಅರಣ್ಯದೊಳಗೆ ಹರಿಯುವ ನದಿಗಳ ಮೂಲಕವೂ, ಕಬಿನಿ ಹಿನ್ನೀರಿನಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಬರುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.

Key words: Minister, Ishwar Khandre, forest, area, plastic free