ರೈತರಿಗೆ ಮೋಸ ಮಾಡುವವರು ಯಾರೇ ಆಗಲಿ ಅವರೆಲ್ಲಾ “ ಲೋಫರ್‌ ಗಳು”: ಶಾಸಕ ಎ.ಮಂಜು

Hassan tobacco market congress MLA A.Manju controversy statement

ಹಾಸನ, ಅ.10,2024: (www.justkannada.in news) ರೈತರಿಗೆ ಮೋಸ ಮಾಡುವವರ ಲೋಫರ್‌ಗಳು ಎಂದು ಅರಕಲಗೂಡು ಶಾಸಕ ಎ ಮಂಜು ಹೇಳಿದ ಮಾತನ್ನು ತಿರುಚಲು ಹೋಗಿ ಅರಕಲಗೂಡು ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀಧರ ಗೌಡ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಜಿಲ್ಲೆಯ ಅರಕಲಗೂಡು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಅರಕಲಗೂಡು ಶಾಸಕ ಎ. ಮಂಜು ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ತಂಬಾಕು ಮಾರುಕಟ್ಟೆಗೆ ಹೋಗಿದ್ದ ವೇಳೆ ಅಲ್ಲಿದ್ದ ತಂಬಾಕು ಬೆಳೆಗಾರರು ತಮಗಾಗುತ್ತಿರುವ ಮೋಸದ ಬಗ್ಗೆ ಶಾಸಕರ ಗಮನಕ್ಕೆ ತಂದರು.

ರೈತರ ಸಮಸ್ಯೆ ಕೇಳಿ ಆಕ್ರೋಶಗೊಂಡ ಎ ಮಂಜು , ಯಾರು ಅವರು ರೈತರಿಗೆ ಮೋಸ ಮಾಡುವವರು ಲೋಫರ್‌ಗಳು ಅಂತಾ ಸಿಟ್ಟು ಹೊರ ಹಾಕಿದ್ರು. ಈ ವೇಳೆ ಅಕ್ರಮವಾಗಿ ಮಾರುಕಟ್ಟೆ ಒಳಗೆ ಬಂದ‌ ಶ್ರೀಧರ್ ಗೌಡ ಮೊದಲು ರೈತರಿಗೆ ಬೈದರಿ ಅಂತಾ ಸುಳ್ಳು ಹೇಳಿ ಗಲಾಟೆ ಶುರು ಮಾಡಿದ.

ಈ ವೇಳೆ ಮತ್ತಷ್ಟು ಆಕ್ರೋಶಗೊಂಡ ಎ ಮಂಜು ನೋಡಪ್ಪ ರೈತರಿಗೆ ಮೋಸ‌ ಮಾಡುವವವರು ಯಾರೇ ಆಗಿರಲಿ ಕಾಂಟ್ರ್ಯಾಕ್ಟರ್ ಆಗಿರಲಿ ಯಾರೇ ಆಗಿರಲಿ ಅವರು ಲೋಫರ್‌ಗಳು ಎಂದರು. ತಕ್ಷಣ ವರಸೆ ಬದಲಿಸಿದ ಶ್ರೀಧರ್ ಗೌಡ ಏಕೆ ಕಾಂಟ್ರ್ಯಾಕ್ಟರ್‌ಗೆ ಬೈದರಿ ಅಂತಾ ತಗಾದೆ ಆರಂಭಿಸಿದ. ಆಗ ಅಲ್ಲಿದ್ದವರು ಶಾಸಕರ ಪರ ದನಿ ಎತ್ತಿದ ಕಾರಣ ಅನಿವಾರ್ಯವಾಗಿ ಶ್ರೀಧರ್  ಅಲ್ಲಿಂದ ನಿರ್ಗಮಿಸಬೇಕಾಯಿತು.

ಶಾಸಕ ಎ ಮಂಜು ಸ್ಪಷ್ಟನೆ ;

ಘಟನೆ  ಸಂಬಂಧ  ಶಾಸಕ‌ ಎ ಮಂಜು ಸ್ಪಷ್ಟನೆ ನೀಡಿದ್ದು,  ನಾನು ಅಲ್ಲಿ ಹೋದಾಗ ರೈತರಿಗೆ ಯಾವ ಯಾವ ರೀತಿ ಮೋಸ ಮಾಡುತ್ತಾರೆ ಅನ್ನೋದನ್ನಾ ರೈತರು ವಿವರಿಸಿ  ತಮ್ಮ ಕಷ್ಟ ಕಾರ್ಪಣ್ಯ ತೋಡಿಕೊಂಡರು.  ಅವರ ಕಷ್ಟ ಕೇಳಿ ನಿಜಕ್ಕೂ ನನಗೆ ಅಘಾತವಾಯಿತು.‌ ದೇಶಕ್ಕೆ ಅನ್ನ ನೀಡುವವರಿಗೂ ಮೋಸ ಮಾಡುತ್ತಾರಲ್ಲ ಲೋಫರ್‌ಗಳು ಅಂತಾ ನಾನು ರೈತರಿಗೆ ಮೋಸ ಮಾಡಿದವರಿಗೆ ಬೈದಿದ್ದು ಸತ್ಯ. ನಾನು ಲೋಫರ್ ಅಂತಾ ಬೈಯ್ದಿದಕ್ಕೆ ಈಗಲು ಬದ್ದನಾಗಿದ್ದೇನೆ. ಬೇರೆಯವರಂತೆ ಮೊದಲು ಹೇಳಿ ನಂತರ ಹೇಳಿಲ್ಲ ಅನ್ನುವುದಿಲ್ಲ. ನಾನು ಲೋಫರ್ ಅಂದಿದ್ದು ಸತ್ಯ.  ಆದರೆ ನಾನು ಕಾಂಟ್ರ್ಯಾಕ್ಟರ್‌ಗಳಿಗಾಗಲಿ ಅಥವಾ ಬೇರೆಯವರಿಗಾಗಲಿ ಲೋಫರ್ ಅಂದಿಲ್ಲ. ಬದಲಿಗೆ ರೈತರಿಗೆ ಮೋಸ ಮಾಡುವಂತಹ ಎಲ್ಲರೂ ಲೋಫರ್ ಅಂತ ಬೈದಿದ್ದೇನೆ.

ಆ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನಮ್ಮ ಅನ್ನದಾತ ನಮಗೆ ಅನ್ನ ನೀಡುವ ರೈತನಿಗೆ ಅದು ಯಾರೇ ಮೋಸ ಮಾಡಿದರು ಅವರು ಲೋಫರ್ ಗಳೇ ಅದು ಶಾಸಕರು ಇರಬಹುದು ಮಂತ್ರಿಗಳಿರಬಹುದು ಅಧಿಕಾರಿಗಳು ಇರಬಹುದು ಮುಖ್ಯಮಂತ್ರಿಗಳು ಇರಬಹುದು ಎಲ್ಲರೂ ಲೋಫರ್‌ಗಳೇ. ಇದು ನನ್ನ ಸ್ಪಷ್ಟ ಅಭಿಪ್ರಾಯ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ‌.  ಒಂದು ವೇಳೆ ನಾನು ರೈತರಿಗೆ ಮೋಸ ಮಾಡಿದರೆ ನಾನು ಸಹ ಲೋಫರ್ ಆಗುತ್ತೇನೆ ಎಂದು ಶಾಸಕ ಮಂಜು ಸ್ಪಷ್ಟನೆ ನೀಡಿದ್ದಾರೆ.

key words: Hassan, tobacco market, congress MLA, A.Manju ,controversy statement