ಜಾತಿಗಣತಿ ವರದಿ: ಸಿಎಂ ಸಿದ್ದರಾಮಯ್ಯರಿಂದ ಡಿಕೆಶಿ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ- ಶಾಸಕ ಶ್ರೀವತ್ಸ

ಮೈಸೂರು,ಏಪ್ರಿಲ್,17,2025 (www.justkannada.in):   ಜಾತಿ ಜನಗಣತಿ ವರದಿ ಬಿಡುಗಡೆ ಸಿಎಂ ಸಿದ್ದರಾಮಯ್ಯ ಅವರ ಒಂದು ರಾಜಕೀಯ ತಂತ್ರಗಾರಿಕೆ ಇದಾಗಿದೆ. ಈ ಮೂಲಕ  ಡಿಕೆ ಶಿವಕುಮಾರ್ ರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವಿರಬಹುದು ಎಂದು  ಬಿಜೆಪಿ ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ, ಜಾತಿ ಜನಗಣತಿ ವರದಿ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆದು ಸರ್ಕಾರ ವೈಫಲ್ಯಗಳನ್ನ ಮುಚ್ಚಿಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.  ಇದೊಂದು ಎದುರಾಳಿ ಮಣಿಸುವ ತಂತ್ರವಾಗಿದೆ. ಸಿದ್ದರಾಮಯ್ಯ ಅಧಿಕಾರ ಅವಧಿ ಮುಕ್ತಾಯವಾಗುವ ಬೆನ್ನಲ್ಲೇ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಇದಾಗಿದೆ ಎನ್ನಿಸುತ್ತಿದೆ ಎಂದು ಲೇವಡಿ ಮಾಡಿದರು.

ಜಾತಿಗಣತಿ ವೈಜ್ಞಾನಿಕವಾಗಿಲ್ಲ. ಇದನ್ನ ಸ್ವತಃ ತಮ್ಮ ಪಕ್ಷದ ಶಾಸಕರು, ಸಚಿವರೇ ಒಪ್ಪುತ್ತಿಲ್ಲ. ಹೀಗಿದ್ದರೂ ತಮ್ಮ ವರದಿ ತರುತ್ತಿರುವ ಉದ್ದೇಶವೇ ಬೇರೆ ಇದೆ  ಎನ್ನಿಸುತ್ತೆ. ನೋಡೋಣ ಯಾವ ಪ್ಲಾನ್ ಹೇಗೆ ವರ್ಕ್ ಔಟ್ ಆಗಲಿದೆ. ಮುಖ್ಯಮಂತ್ರಿ ಒಂದು ಟೆಸ್ಟ್ ಡೋಸ್ ನೀಡಿದ್ದಾರೆ ಅಷ್ಟೇ. ಜಾತಿಗಣತಿ ಮೂಲಕ  ಹಗರಣಗಳನ್ನು ಮರೆ ಮಾಚುವ  ಕೆಲಸ ಮಾಡುತ್ತಿದೆ. ಎಲ್ಲರ ಗಮನ ಬೇರೆಡೆ ಸೆಳೆಯುವ ತಂತ್ರ ಇದಾಗಿದೆ. ಮುಂದೆ ಸರ್ಕಾರದ ವಿರುದ್ಧ ಸಾಧು ಸಂತರು, ಸಾಹಿತಿಗಳು ಹೊರಟಕ್ಕೆ ಇಳಿಯಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಗೋಕಾಕ್ ಮಾದರಿ ಚಳುವಳಿ ನಡೆಯಲಿದೆ ಶಾಸಕ ಟಿ ಎಸ್ ಶ್ರೀವತ್ಸ  ತಿಳಿಸಿದರು.

Key words: Caste Census Report,  CM Siddaramaiah, DK Shivakumar, MLA,  Srivatsa